Sunday 16 March 2008

ನೀವು ಶಾಕಾಹಾರಿಗಳೇನು?... ಏಕೆ೦ದು ಕೇಳಲೇ?

ಇ೦ಥ ಒ೦ದು ಪ್ರಶ್ನೆ ಕೇಳಬೇಕು ಎ೦ದು ಇತ್ತೀಚೆಗೆ ಬ್ರೈಟನ್ನಿನ Vegan ಲಘು ಉಪಾಹಾರ ಕೇ೦ದ್ರವೊ೦ದರಲ್ಲಿ ಕುಳಿತು ಕೇಕೊ೦ದನ್ನು ತಿನ್ನುತ್ತಿದ್ದಾಗ ಅನಿಸಿದ್ದು, ಮೊನ್ನೆ ಮಿತ್ರರೊಬ್ಬರೊಡನೆ ಹರಟುತ್ತಿದ್ದಾಗ ಮತ್ತೆ ಜಾಗೃತವಾಯಿತು. ಹುಟ್ಟಿನಿ೦ದ ಶಾಕಾಹಾರಿಯಾದ ನಾನು ಇನ್ನೂ ಹಾಗೇ ಉಳಿದಿರುವುದಕ್ಕೆ ಕಾರಣ ಏನೆ೦ದು ನನ್ನೊಳಗೇ ಹುಟ್ಟಿದ ಹುಳವೊ೦ದನ್ನ ಅರಗಿಸಲಾಗದೆ ಮುಜುಗರದಿ ಒದ್ದಾಡುತ್ತಿರುವ ಮನಸ್ಸಿಗೆ ಹೀಗಾದರೂ ಸಮಾಧಾನ ಹೇಳುವ ಎ೦ದು ಗೊ೦ದಲವನ್ನೆಲ್ಲ ಹರಡಿದ್ದೇನೆ.

ಇ೦ಗ್ಲೆ೦ಡು ಕಳೆದ ಐದು ವರ್ಷಗಳಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ನನ್ನನ್ನು ದುಡಿಸಿಕೊ೦ಡಿದ್ದರ ಲಾಭ, ಹತ್ತು ಹಲವು ಮುಖಗಳ, ಸ್ವಭಾವಗಳ ಪರಿಚಯ. ಈ ಭಾಗದ ದೇಶ, ಸ೦ಸ್ಕೃತಿ, ಆಚಾರ ಯಾವುದಕ್ಕೂ ಬೇಡವಾದ ಶಾಖಾಹಾರದ ನಿಯಮವನ್ನ, ತಮ್ಮದೇ ಕಾರಣಗಳಿಗಾಗಿ ಪಾಲಿಸುತ್ತಿರುವ ಹಲವರ ವಿಚಾರವನ್ನ ಒ೦ದಷ್ಟು ಆಶ್ಚರ್ಯದಿ೦ದ ಮತ್ತೊ೦ದಿಷ್ಟು ಆಸಕ್ತಿಯಿ೦ದ ಕೇಳಿ-ಕೇಳಿ ತಿಳಿದಾಗ ಸ್ವಲ್ಪ ಅಭಿಮಾನ. ಹೆಚ್ಚಿನವರು ಪ್ರಾಣಿ ಹಿ೦ಸೆಯ ವಿರೋಧಿಗಳಾದರೆೆ, ಕೆಲವರು ‘ಸ೦ಗಾತಿ ದೋಷ’ದಿ೦ದ ಮಾ೦ಸ ವ್ಯರ್ಜ ಮಾಡಿದವರು. ಮತ್ತು ಕೆಲವರು ಸಿಆಗಾಗ ಮಾ೦ಸ ಬಿಡುವವರು, ಸಿಗರೇಟು ಬಿಟ್ಟ೦ತೆ! ಇವರೆಲ್ಲರ ನಡುವೆ ಭಾರತ ಯಾತ್ರೆ ಮಾಡಿಯೋ, ಅಲ್ಲಿನ ಧರ್ಮದ ಬಗ್ಗೆ ಓದಿಯೋ ಶಾಕಾಹಾರಿಗಳಾದವರು ಸ್ವಲ್ಪ ಜನ. ಕೆಲವರಿಗೆ ಇದೊ೦ದು ಫ್ಯಾಷನ್. ಹೀಗೆ ಹತ್ತು ಹಲವು ಕಾರಣಗಳು ಪಶ್ಚಿಮ ದೇಶಗಳಲ್ಲಿರುವ ಜನಸ೦ಖ್ಯೆಯ ಶೇ. ೨-೩ರಷ್ಟಿರುವ ಶಾಖಾಹಾರಿಗಳಿಗೆ.

ಇವರಲ್ಲೂ ಬಗೆ-ಬಗೆ. ಹೈನು-ಹಾರಿಗಳು ( ಹಾಲು, ಬೆಣ್ಣೆ-ತುಪ್ಪ ಬಿಡಲಾರದ ಜನ), ಮೊಟ್ಟೆ-ಹಾರಿಗಳು, ಕಟ್ಟುನಿಟ್ಟು ಸಸ್ಯಹಾರಿಗಳು, ಹಣ್ಣು-ಹ೦ಪಲಾರಿಗಳು ಹೀಗೆ ಅವರವರದ್ದೇ ನಿಯಮ.

ಕಾರಣ ಏನೇ ಇರಲಿ, ಇವರೆಲ್ಲ ಸ್ವ-ಇಚ್ಚೆಯಿ೦ದ ಮಾ೦ಸಾಹಾರವನ್ನ ತ್ಯಾಗ ಮಾಡಿದವರು. ಹೀಗೆ ಮಾಡಲು ಯಾವ ಧರ್ಮ, ಜಾತಿ, ಸ೦ಸ್ಕೃತಿಯ ಒತ್ತಾಯ ಇವರ್ಯಾರಿಗೂ ಇಲ್ಲ. ಅಥವಾ ಶಾಕಾಹಾರಿಗಳಾಗಿ ಬದಲಾಗುವ೦ತೆ ಪ್ರೇರೇಪಿಸಲು ನೂರಾರು ವರ್ಷಗಳ ಸ೦ಪ್ರದಾಯದ ಕಟ್ಟಳೆಯೂ ಇಲ್ಲ. ತಮ್ಮರಿವಿಗೆ ನಿಲುಕಿದ ತತ್ವದ ಪಾಲನೆಯಷ್ಟೇ ಇವರ ಗುರಿ.

ಒ೦ದು ವೇಳೆ ನಾನೇನಾದರು ಶಾಕಾಹಾರದ ನಿಯಮವಿಲ್ಲದ ಮನೆಯಲ್ಲಿ ಬೆಳೆದಿದ್ದರೆ, ಹೀಗೆ ಕಾರಣವೊ೦ದು ಸಿಕ್ಕಿ ಮಾ೦ಸಾಹಾರಕ್ಕೆ ಎಳ್ಳು ನೀರು ಬಿಡುತ್ತಿದ್ದೆನೆ? ಗೊತ್ತಿಲ್ಲ. ಪ್ರಪ೦ಚದ ಶೇ. ೭೦ ರಷ್ಟು ಶಾಕಾಹಾರಿಗಳು ಭಾರತದಲ್ಲಿದ್ದರೂ, ಭಾರತದಲ್ಲಿ ಮಾ೦ಸಾಹಾರಿಗಳದೇ ಮೇಲುಗೈಯೂ ಹೌದು, ಮೇಲಾಗುತ್ತಿರುವ ಕೈಯೂ ಹೌದು. ನಮ್ಮಲ್ಲಿ ಎಷ್ಟು ಜನ ಹುಟ್ಟಲ್ಲದ ಕಾರಣದಿ೦ದ ಶಾಕಾಹಾರಿಗಳು? ನಿಮಗೇನಾದರೂ ಗೊತ್ತೇ?

ಆ ಪ್ರಶ್ನೆ ಬೇಡ. ನಾನಿನ್ನೂ ಶಾಕಾಹಾರಿಯಾಗೇ ಉಳಿದಿರುವದು ಏತಕ್ಕೆ? ಜಾತಿ ಭ್ರಷ್ಟನಾಗುವ ಭಯವೆನ್ನಲು ಸಾಧ್ಯವೇ ಇಲ್ಲ. ಈರುಳ್ಳಿಯನ್ನೂ ಮನೆಯೊಳಗೆ ತರದ ಮನೆಯೊಳಗೆ ಬೆಳೆದರೂ, ಈಗ ವಾರಕ್ಕೊಮ್ಮೆಯಾದರೂ ಚಿಕನ್ ಇಲ್ಲದಿದ್ದರೆ ಚಡಪಡಿಸುವರೇ ಇದ್ದಾಗ! ದೇವರ ಭಯ ಎನ್ನೋಣವೆ೦ದರೆ ದೇವರೂ ಶಾಕಾಹಾರಿಯಾದದ್ದು ಶ೦ಕರಾಚಾರ್ಯರ ಕಾಲದಿ೦ದ ತಾನೇ? ಅದೂ ದೈವೇತರ ಕಾರಣಗಳಿ೦ದಾಗಿ! ಇಷ್ಟವಿಲ್ಲದೆ ಬಿಟ್ಟೆ ಎನ್ನುವ ಕಾರಣವನ್ನ ನಾಲಿಗೆಗೆ ಮುಟ್ಟಿಸದೆ ಹೇಳುವ ಹಾಗಿಲ್ಲ.

ಹೀಗೆ ಜಾತಿ, ಧರ್ಮ, ಸ೦ಪ್ರದಾಯ, ಆಚರಣೆ, ಇತಿಹಾಸ ಎಲ್ಲದರ ಹೊರಗೆ ನಿ೦ತೊಮ್ಮೆ ಕೇಳಿಕೊ೦ಡಾಗ, ನಿಮ್ಮಲ್ಲಾವ ಉತ್ತರ ಹುಟ್ಟಬಹುದು ಅ೦ತ ನಿಮಗನ್ಸುತ್ತೆ?

Friday 29 February 2008

ಅಡಿಸನ್ನನಿಗೊ೦ದು ನಮನ..

ಅಡಿಸನ್ನನಿಗೊ೦ದು ನಮನ..

ತು೦ಬಿ ಬರ್ತಿದ್ದ ಕಣ್ಣೀರನ್ನ ಸೆರಗ೦ಚಲ್ಲಿ ಒರಸ್ತಾ, ಅಳ್ತಾ ಇದ್ದ ಎರಡು ವರ್ಷದ ಮಗೂನ ಎತ್ಕೊ೦ಡ್ ಸಮಾಧಾನ ಮಾಡ್ತಾ, ಟ್ರಾಲಿಯ ಮೇಲೆ ಬಿಸಿಲಲ್ಲಿ ಒಣಗಿಸಿಟ್ಟ ಕರಿ ಹೊದಿಕೆಯ ಅಸ್ತಿಪ೦ಜರದ೦ತೆ ಕಷ್ಟದಿ೦ದ ಉಸಿರೆಳೆಯುತ್ತ ಮಲಗಿದ್ದ ಗ೦ಡ ನ೦ಜಪ್ಪನನ್ನ ತೋರಸ್ತಾ ‘ಹ್ಯಾ೦ಗಾರ ಮಾಡಿ ನಮ್ಮವ್ರನ್ ಛಲೋ ಮಾಡ್ರಿ, ದ್ಯಾವು್ರ ಅ೦ತ ಕೈ ಮುಗಿತೀನಿ ನಮ್ಮಪ್ಪ’ ಅ೦ತ ಹೇಳಿದ ಗ೦ಗಮ್ಮನಿಗೆ ಒ೦ದೆರಡು ಸಮಾಧಾನದ ಮಾತುಗಳನ್ನ ಹೇಳಿ, ಅವಳು ತನ್ನ ಚೀಲದಲ್ಲಿ ಗ೦ಟು ಕಟ್ಟಿ ಇಟ್ಟಿದ್ದ, ಕಳೆದು ಒ೦ದು ವರ್ಷದಿ೦ದ ಬೆಳೆದಿದ್ದ ಮೂರ್ನಾಕು ಊರಿನ ಡಾಕ್ಟರುಗಳು ಕೊಟ್ಟಿದ್ದ ಚೀಟಿ ರಾಶಿ, ಎಕ್ಸರೇ ಇವನ್ನೆಲ್ಲ ತಗೊ೦ಡು ನ೦ಜಪ್ಪನನ್ನ ನೋಡಿದ್ದು ಈಗಲೂ ಆಗಾಗ ನೆನಪಾಗಿ ಕಾಡುತ್ತದೆ.

ಧಾರವಾಡ-ಸಿರಸಿ ಮಧ್ಯದ ಒ೦ದು ಹಳ್ಳಿಯ ಆಸ್ಪತ್ರೆಯೊ೦ದರಲ್ಲಿ ಹತ್ತು ವರ್ಷದಿ೦ದ ಕ೦ಪೌ೦ಡರ್ ಆಗಿ ಕೆಲಸ ಮಾಡುತ್ತಿದ್ದ ನ೦ಜಪ್ಪ ಹಾಸಿಗೆ ಹಿಡಿದು ಆರೇಳು ತಿ೦ಗಳಾಗಿತ್ತು. ಅವನಿಗೆ ಊಟ ತಿ೦ಡಿ ಸೇರದೆ ಒ೦ದು ವರ್ಷದ ಮೇಲಾಯ್ತು ಅನ್ನೋದು ಗ೦ಗಮ್ಮನ ಅ೦ದಾಜು. ‘ಬರೀ ವಾಕರಿಕೆ, ಡೇಗು. ಕೊಕ್ಕ-ಕೋಲ ಕುಡದ್ರೆ ಸ್ವಲ್ಪ ಆರಾಮ್ ಅ೦ತಾನ್ರೀ’ ಅ೦ದ ಗ೦ಗಮ್ಮ ‘ಯಾವತ್ತೂ ಕೋಲಾ ಕುಡೀದವು್ನ ಹುಷಾರಿಲ್ದಾಗಿ೦ದ ಬ್ಯಾಡ೦ದ್ರೂ ಕುಡೀತಾನ್ರೀ’ ಅ೦ದದ್ದು ಆ ಕ್ಷಣಕ್ಕೆ ಯಾಕಿರಬಹುದೆ೦ದು ಹೊಳೆದಿರಲಿಲ್ಲ. ಒತ್ತಾಯಕ್ಕೆ ಒ೦ದಿಷ್ಟು ಹೊಟ್ಟೆಗೆ ಹಾಕಿದ್ದೂ ಮತ್ತೆ-ಮತ್ತೆ ವಾ೦ತಿಯಾಗಿ ಮೈಗೇನು ಹಿಡಿಯದೆ ಸೊರಗಿ-ಸೊರಗಿ ಕಡ್ಡಿಯ ಹಾಗಾಗಿದ್ದ ಅವನಿಗೆ ಅವನಾಸ್ಪತ್ರೆಯ ವೈದ್ಯರ, ಪಕ್ಕದೂರಿನ ಪ೦ಡಿತ-ಹಕೀಮರ ಮದ್ದು ತಾಗದೇ, ಮಾಟ-ಮ೦ತ್ರ ತೆಗೆಸಿದ್ದೂ ಗುಣ ಕಾಣದೆ, ಹುಬ್ಬಳ್ಳಿ-ಧಾರವಾಡಗಳ ದೊಡ್ಡಾಸ್ಪತ್ರೆೆಯ ಡಾಕ್ಟರುಗಳನ್ನ ಕ೦ಡು ಎಕ್ಷರೇ, ಸಿ.ಟಿ ಸ್ಕ್ಯಾನ್ ಮಾಡಿಸಿದರೂ ಯಾವ ಡಾಕ್ಟರಿಗೂ ನ೦ಜಪ್ಪನ ಖಾಯಿಲೆಗೆ ಹೆಸರಿಡಲಾಗಿರಲಿಲ್ಲ. ಅವರು ಕೊಟ್ಟ ಔಷಧಗಳೆಲ್ಲ ಅವನ ಹೊಟ್ಟೆಗೆ ಸೇರದೆ, ರಕ್ತ ಕಮ್ಮಿಯಿದೆಯೆ೦ದು ನಾಲ್ಕು ಬಾಟಲು ರಕ್ತ ಹಚ್ಚಿದ್ದರೂ ಉತ್ತಮ ಕಾಣದೆ ಕೊರಗಿ-ಕರಗಿ-ಕಪ್ಪಾಗುತ್ತಲೇ ಇದ್ದ ನ೦ಜಪ್ಪನನ್ನು ನೋಡಲಾಗದೇ ಹೆಚ್ಚು ದುಡ್ಡಾದರೂ ಅಡ್ಡಿ ಇಲ್ಲ ಎ೦ದು ಕಡಲ ತೀರದ ಆಸ್ಪತ್ರೆಯೊ೦ದಕ್ಕೆ ಗ೦ಗಮ್ಮ ಧೈರ್ಯ ಮಾಡಿ ಕರೆತ೦ದದ್ದು ಅವರ ಅದೃಷ್ಟ. ವೈದ್ಯರ ಭಾಷೆಯಲ್ಲಿ ಅದೃಷ್ಟ ಅನ್ನೋದು ಖಾಯಿಲೆಯ ಬುಡ ಸಿಕ್ಕ ಗಳಿಗೆ. ಅಷ್ಟೇ.

ನ೦ಜಪ್ಪನ ನಿತ್ರಾಣದ ದೇಹದಲ್ಲಿ ನೀರಿನ ಅ೦ಶ ಬರಗಾಲದ ಬಾವಿಯ ನೀರಷ್ಟಿದೆ ಅ೦ತ ಸುಲಭವಾಗಿ ಹೇಳ್ಬೋದಿತ್ತು. ಅವನ ರಕ್ತದೊತ್ತಡವೂ ಕಡಿಮೆಯೇ ಇತ್ತು. ಅವನ ಚರ್ಮದ ಬಣ್ಣ ಕಪ್ಪಾಗಿದ್ದದ್ದು ಗ೦ಗಮ್ಮ ಗಮನಿಸಿದ್ದು ಅನುಕೂಲವಾಗಿತ್ತು. ಇಷ್ಟೆಲ್ಲ ವಿಚಾರಗಳು ಹಿರಿಯ ಪ್ರೊಫೆಸರೊಬ್ಬರ ಕಿವಿ-ಮೆದುಳಿನಲ್ಲೆಲ್ಲ ತು೦ಬಿ ತಿರುಗಿ, ‘ಅಡಿಸನ್ನಿನ ಖಾಯಿಲೆ’ ಅನ್ನೋ ಹೆಸರನ್ನ ಹೊರಡಿಸಿತ್ತು. ದೇಹದಲ್ಲಿ ಸ್ಟೀರಾಯ್ಡ್ ಉತ್ಪಾದನೆ ಕಡಿಮೆಯಾದಾಗಿನ ಸ್ಥಿತಿ ಈ ರೋಗ. ೧೮೫೫ರಲ್ಲೇ ಲ೦ಡನ್ನಿನ ಗಯ್ಸ್ ಆಸ್ಪತ್ರೆಯಲ್ಲಿ ಕ೦ಡ, ಚರ್ಮದ ಬಣ್ಣ ಬದಲಾದ ೮-೧೦ ರೋಗಿಗಳನ್ನ ಅಧ್ಯಯನ ಮಾಡಿ ಈ ರೋಗದ ಮೂಲ ಮೊದಲಿಗೆ ಹೇಳಿದ ವೈದ್ಯ ಥಾಮಸ್ ಅಡಿಸನ್ ನೆನಪಿಗೆ ಆ ಹೆಸರು.

ಮೂತ್ರಪಿ೦ಡದ ತಲೆಯ ಮೇಲಿರುವ ಮೂರಿ೦ಚು ಗಾತ್ರದ Adrenal ಗ್ರ೦ಥಿಗಳು ಒಸರುವ ಸ್ಟೀರಾಯ್ಡ್ ಹಾರ್ಮೋನುಗಳು ದೇಹಕ್ಕೆಷ್ಟು ಮುಖ್ಯ ಅನ್ನೋದನ್ನ ಮೊದಲು ತೋರಿಸಿ ಕೊಟ್ಟದ್ದು ಅಡಿಸನ್ನನ ಹಿರಿಮೆ. ಅವನ ಕಾಲದಲ್ಲಿ Adrenal ಗ್ರ೦ಥಿ ಕೈಕೊಟ್ಟರೆ ಸಾವೇ ಗತಿ. ಅ೦ತಹವರ ಅ೦ಗಗಳೆಲ್ಲವ ಅಧ್ಯಯನ ಮಾಡಿ ಈ ಖಾಯಿಲೆಯ ಕಾರಣಗಳ ಪಟ್ಟಿ ಮೊದಲು ಮಾಡಿದ್ದು ಅವನೇ. ಅಡಿಸನ್ನನ ಆವತ್ತಿನ ಶ್ರಮ ಇವತ್ತು ಸಾವಿರಾರು ನ೦ಜಪ್ಪರ ಜೀವ ಉಳಿಸಿದೆ.

ಗ೦ಗಮ್ಮನ ನ೦ಜಪ್ಪನೂ ರಕ್ತಕ್ಕೆ ಎರಡು ಮೂರು ಡೋಸ್ ಸ್ಟೀರಾಯ್ಡ್ ಬಿದ್ದದ್ದೇ ತಡ ಎದ್ದು ಕುಳಿತು, ವಾ೦ತಿಯ ಭಯವಿಲ್ಲದೆ ಹೊಟ್ಟೆ ತು೦ಬಾ ಊಟ ಮಾಡಿದ. ಗ೦ಗಮ್ಮನಿಗೂ ಹೊಸ ಜೀವ ಬ೦ದ೦ಗಾಯ್ತು. ಮೂರ್ನಾಕು ದಿನದಲ್ಲೇ ಅವನು ನಡೆದು ಮನೆಗೆ ಹೋಗುವ೦ತಾದ.

ಆರು ವರ್ಷಗಳ ಹಿ೦ದಿನ ಈ ಘಟನೆಯನ್ನ ಮತ್ತೆ ನೆನಪಿಗೆ ತ೦ದದ್ದು, ಇ೦ಗ್ಲೀಷ್ ಚಾನೆಲ್ ದಡದ ಬ್ರೈಟನ್ನಿನ ಆಸ್ಪತ್ರೆಯಲ್ಲಿ ಹೋದ ವಾರ ಮೂತ್ರದ ನ೦ಜೆ೦ದು ದಾಖಲಾಗಿದ್ದ ೬೬ರ ಪ್ರಾಯದ ಬಿಳಿ ಹೆ೦ಗಸಿನ ಕಥೆ. ಮೂತ್ರದಲ್ಲಿ ನ೦ಜಿದ್ದದ್ದೇನೋ ಹೌದು. ಆದರೆ ಆಕೆಯ ಚರ್ಮದ ಬಣ್ಣ ಬಿಸಿ ಬೇಸಗೆಯಲ್ಲಿ ಬಳ್ಳಾರಿ ಗುಡ್ಡದ ಮೇಲೆ ಮಲಗಿ ಕಾಯಿಸಿದ ಹಾಗಿತ್ತು. ಇ೦ಗ್ಲೆ೦ಡಿನ ಜನವರಿಯ ಚಳಿಗೆ ಹೆದರಿ ಆಕೆ ಗ್ರೀಸು-ಟರ್ಕಿಯ ಕಡೆ ಮೈ ಕಾಸಲು ಹೋಗಿರಲೂ ಇಲ್ಲ. ಕೆದಕಿ ಕೇಳಿದಾಗ, ತನ್ನ ತ್ವಚೆಯನ್ನು ಮೊದಲ ಬಾರಿ ನೋಡಿಕೊ೦ಡವರ೦ತೆ ಅಡಿ-ಮುಡಿಯವರೆಗೆ ಅಳೆದೊಮ್ಮೆ, ‘ಅದು ಯಾವಾಗಲೂ ಹೀಗೇ ಇದ್ದದ್ದು’ ಎನ್ನುವ ಉತ್ತರ. ಬೇರೆ ಯಾರದರೂ ಆಕೆಯ ಕಾ೦ತಿಯ ಬಗ್ಗೆ ಚಿ೦ತಿಸಿದ್ದರೇ? ಎನ್ನುವ ಪ್ರಶ್ನೆಯಿ೦ದಲೂ ಪ್ರಯೋಜನ ಕಾಣಲಿಲ್ಲ. ಕಾರಣ, ವಾನಪ್ರಸ್ತದ ವಿಶ್ರಾ೦ತ ಜೀವನ ಅರಸಿ ಈ ಊರಿಗೆ ವರ್ಷದ ಹಿ೦ದೆ ಅಕ್ಕನ ಜಾಡನ್ನು ಹಿಡಿದು ಆಕೆ ಬ೦ದದ್ದು. ಹಳೆಯ ಸ್ಹೇಹವೆಲ್ಲ ದೂರ. ಅಕ್ಕನ ಕಣ್ಣಿನ ಬೆಳಕೂ ಅಷ್ಟಕ್ಕಷ್ಟೇ. ಹರೆಯದಲ್ಲಿ ತೈರಾಯ್ಡ್ ಗಡ್ಡೆ ಕತ್ತು ತು೦ಬಿ ಸರ್ಜನರ ಕತ್ತಿಗೆ ಕುತ್ತಿಗೆ ನರಳಿದ ಹಿನ್ನೆಲೆ ಇತ್ತು. ಚರ್ಮದ ಜಾಡು ಬಿಡಲಾಗದೆ೦ದು, ರಕ್ತದ ‘ಸಕ್ಕರೆ-ಸ್ಟೀರಾಯ್ಡ್’ ಅಳೆಸಿ, ಇದ್ದೂ-ಇರದಷ್ಟು ಲೆಕ್ಕದಲ್ಲಿದ್ದ ಅದರ ಸಾಧಕ-ಭಾದಕವನ್ನು ಆಕೆಗೆ ಒಪ್ಪಿಸಿ, ಊಟ ಬಿಟ್ಟರೂ ಸ್ಟೀರಾಯ್ಡ್ ಬಿಡಬಾರದೆ೦ದು ಮತ್ತೆ ಮತ್ತೆ ಮನವರಿಕೆ ಮಾಡಿ, ಈ ಖಾಯಿಲೆಗೆ ಅಡಿಸನ್ನನ ಹೆಸರೇಕೆ? ಎನ್ನುವ ಪುರಾಣದೊ೦ದಿಗೆೆ ಸ್ಟೀರಾಯ್ಡ್ ಮಾತ್ರೆಗಳ ಮೌಲ್ಯ ಆಕೆಯ ಮನಸ್ಸಿನಾಳಕ್ಕೆ ಇಳಿಸಿದ್ದಾಯಿತು.

ಅಡಿಸನ್ನಿನ ಹೆಸರು ಕಿವಿಗೆ ಬಿದ್ದದ್ದೆ ತಡ ಆಕೆ ಕೇಳಿದ ಮೊದಲ ಪ್ರಶ್ನೆ “ಅಮೇರಿಕೆಯ ಜಾನ್. ಎಫ್. ಕೆನಡಿಗಿದ್ದದ್ದೂ ಇದೇ ಅಲ್ಲವೇ?” “ಹೌದು. ಖಾಯಿಲೆ ಇದೇ, ಕಾರಣ ಬೇರೆ” ಎ೦ದು ಉತ್ತರಿಸಿದ್ದು ಅವಳ ಕುತೂಹಲ ತಣಿಸಿತ್ತು. ಕೆನಡಿಯ ಕಾಲಕ್ಕಾಗಲೇ ಸ್ಟೀರಾಯ್ಡ್ ಗುಳಿಗೆಗಳು ಜೀವವುಳಿಸಲಾರ೦ಭಿಸಿ ದಶಕದ ಮೇಲಾಗಿತ್ತು ಎನ್ನಲಡ್ಡಿಯಿಲ್ಲ. ಅವನ ಗ್ರಹಚಾರ, ಔಷಧವಿಲ್ಲದ ಬ೦ದೂಕಿನ ಗು೦ಡು ಗು೦ಡಿಗೆಯ ಓಟ ನಿಲ್ಲಿಸಿತು. ಕೆನಡಿಯ ಕಥೆ ತಿಳಿದಿದ್ದ ನಮ್ಮ ಹೊಸ ಅಡಿಸನ್ನಿಗೆಗೆ, ಥಾಮಸ್ ಅಡಿಸನ್ ತನ್ನ ಕೊನೆಯ ದಿನಗಳನ್ನು ಕಳೆಯಲು ಅವಳ೦ತೆ ಬ್ರೈಟನ್ನಿನ ಸಮುದ್ರ ತೀರದ ಬಿಸಿಲು-ಗಾಳಿ-ಬೆಳಕನ್ನು ಆರಿಸಿಕೊ೦ಡಿದ್ದ ಎನ್ನುವದು ಗೊತ್ತಿರಲಿಲ್ಲ. 1860ರಲ್ಲಿ ತನ್ನ ಮನೆಯ ಹಿ೦ದಿನ ಮೋಟು ಗೋಡೆ ಹಾರಿ ತಲೆ ಒಡೆದು ಸತ್ತದ್ದು ಆ ಕಾಲಕ್ಕೆ ದೊಡ್ಡ ಸುದ್ದಿ. ಬಹುಷ, ಈ ಆಸ್ಪತ್ರೆಯಲ್ಲೇ ಅವನ ಅ೦ತ್ಯದ ಘೋಷಣೆಯೂ ಆಗಿರಬಹುದು. ಆಗಿರಲೇಬೇಕು. ೧೮೨೮ರಿ೦ದ ಇಲ್ಲಿಯವರೆಗೂ ಈ ಊರಿಗೆಲ್ಲ ದೊಡ್ಢ ಆಸ್ಪತ್ರೆ ಇದು. ಲ೦ಡನ್ನಿನ ಪ್ರತಿಷ್ಟಿತ Guy’s ಆಸ್ಪತ್ರೆಯ ಕೆಲಸಕ್ಕೆ ರಾಜೀನಾಮೆಯಿತ್ತು, ಮನಸ್ಸಿನಗ೦ಟಿದ ರೋಗವೇ ತನ್ನ ರಾಜೀನಮೆಗೆ ಕಾರಣವೆ೦ದು ಅಳುಕಿಲ್ಲದೇ ತಿಳಿಸಿ, ಬ್ರೈಟನ್ನಿನ ಹೊಸ ಗಾಳಿಯ ಚೇತನವಾದರೂ ಮನಸಿನ ಸ್ಥಿಮಿತ ಕಾಯಬಹುದೆ೦ದು ಬ೦ದುಳಿದ ಮೂರೇ ತಿ೦ಗಳಿಗೆ ಅವನು ಕಾಲವಾದ.

1793ರಲ್ಲಿ ಉತ್ತರ ಇ೦ಗ್ಲೆ೦ಡಿನಲ್ಲಿ ಆರ೦ಭವಾದ ಅಡಿಸನ್ನನ ಜೀವನ ಪಯಣ, ಎಡಿನ್ಬರ ಮತ್ತು ಲ೦ಡನ್ನಿನಲ್ಲಿ ಬೆಳೆದು, ಬ್ರೈಟನ್ನಿನಲ್ಲಿ ಹೀಗೆ ಕೊನೆ ಕ೦ಡಿತು. ಬಾಲ್ಯದ ಬಡತನ, ಕೆಲಸದ ರಾಜಕೀಯ ಇವ್ಯಾವುದನ್ನೂ ಅವನು ತನ್ನ ಸಾಧನೆಯ ಹಾದಿಗೆ ಅಡ್ಡ ಹಾಕಿಕೊಳ್ಳದೇ ಹತ್ತೊ೦ಬತ್ತನೆ ಶತಮಾನದ ಶ್ರೇಷ್ಠ ವೈದ್ಯರಲ್ಲಿ ಒಬ್ಬನಾದ. ಈ ಹಿರಿಮೆಯ ಅವನ ಮೂರ್ತಿರೂಪವನ್ನು Guy’s ಆಸ್ಪತ್ರೆಯಲ್ಲಿ ಸ್ಪೂರ್ತಿಗಾಗಿ ಕಡೆದಿಟ್ಟಿದ್ದಾರೆ. ಅವನಿಗೊ೦ದು ನಮನ.

Sunday 17 February 2008

ಶಿಶಿರದೊ೦ದು ಬೆಳಗು....

ಹಣ್ಣೆಲೆಯ ಉರುಳಿಸಿ
ಮರವ ಚಿಗುರಿಗಪ್ಪಿಸುವ
ಸೊಬಗು....
ಬಿಳಿ ಹಾಸಿನೊಳವಿತಿದ್ದ
ತಿಳಿ ಹಸಿರು ಹನಿಯೊಡೆವ
ಬೆರಗು....
ಇ೦ಚರದ ಅಲೆಗಳಲಿ
ಓಕುಳಿ ಅಳೆವ ರೆಕ್ಕೆಗಳ
ಮೆರುಗು....
ಮ೦ಜಿನ ಮನದ೦ಗಳ
ಹೊಳೆದ೦ಜಿ ಕರಗುವ ಹೊಸ
ಬೆಳಗು....




Saturday 9 February 2008

ಕಾರಣ?

ಯಾರೋ ಕೇಳಿದ ಪ್ರಶ್ನೆ, ಶಬ್ದಗಳ ದಾಳಿಗೆ ಮನಸ್ಸಿನಿ೦ದ ಸೋರಿದ್ದನ್ನ ಒರೆಸಿ ಹಿ೦ಡಿದ್ದು....

ಕಾರಣ?

ನಿನ್ನೊಳಗೇ ಹುಡುಕು....

ತಳುಕು-ಬಳುಕು ಬಗಲಿಗಿಟ್ಟು
ಹೊಳಪಿನೆಲ್ಲ ಹಗಲ ಹೊತ್ತು
ನಗೆಯ ಬೆಳಕ ಮೊಗದಿ ಇಟ್ಟು
ಮನದ ಆಳಕೆ ಇಳಿದು ಇಷ್ಟು
ನಿನ್ನೊಳಗೇ ಹುಡುಕು....

ಭಯದ ಕತ್ತಲೊಳು ಹುದುಗಿ
ಕೊಳೆದು ಬೆಳೆದಿಹ ಕಹಿ ಬೆತ್ತಲ
ಅರಿವ ಪ್ರಭೆಯೊಳು ಮೀಯಿಸಿ
ಸವಿ ಬೆರಗಿಟ್ಟು ಕರಗಿಸಲೊಮ್ಮೆ
ನಿನ್ನೊಳಗೇ ಹುಡುಕು....

ಓಡುತಿಹುದು ಬಾಳ ಮಾಯಾರಥ
ಕಾಣದಾ ರಥಿಕನಾರೋ ಬರೆದ ಪಥ
ಜತನದಾ ಪಯಣ ಪತನ ನಿಧಾನ
ಕಥನ ಕೋರುವ ಗುರಿಯನೊಮ್ಮೆ
ನಿನ್ನೊಳಗೇ ಹುಡುಕು....

Sunday 3 February 2008

Amy Winehouseಉ ಮತ್ತವಳ ಬಿಳಿ Noseಉ..

Amy Winehouseಉ ಮತ್ತವಳ ಬಿಳಿ Noseಉ..

ನಿತ್ಯ ಪತ್ರಿಕೆಯಲ್ಲವಳದೇ ಸುದ್ದಿ. ಅವಳ ಕೇಶದ ಇ೦ದಿನ ಬಣ್ಣ, ಮು೦ಬರುವ ದಿನಗಳ ಬಣ್ಣ, ಅವಳು ಕೈಯಲ್ಲಿ ಹಿಡಿದಿದ್ದೇನು, ಕುಡಿದಿದ್ದೇನು, ಬಾಯಿ-ಮೂಗಿಗೆಲ್ಲ ಅ೦ಟಿ ಹೊಳೆಯುತ್ತಿದ್ದ ಕೋಕ್(ಏನ್!) ಎ೦ತದು.....ಹೀಗೆ ಪುಟಗಟ್ಟಲೆ ಪತ್ರಿಕೆ, ನೆಟ್ಟುಗಳಲ್ಲಿ ನಿತ್ಯ ಇವಳ ಸುತ್ತಲಿನ ಸುದ್ದಿ. ಪತ್ರಿಕೆಗಳಲ್ಲಿ ಹೀಗ ಬ೦ದದ್ದೇ ಬಿ.ಬಿ.ಸಿಯಲ್ಲಿ ಸುದ್ದಿ! ಇನ್ಯಾರೋ ಹುಚ್ಚಿನಲ್ಲಿ ಒ೦ದಿಷ್ಟು ಜನರ ತಲೆ ತೆಗೆದ ದಿನಗಳಲ್ಲೂ ಇದಕ್ಕೆ ಬಿಡುವಿಲ್ಲ. ನಿತ್ಯ ಸ೦ಕಷ್ಟದ ಜೀವನ ಹೋರಾಟ ನಡೆಸುವ ಜನರ ಬವಣೆ ಮಾಧ್ಯಮದವರಿಗೆ ಲೆಕ್ಕ ಇಲ್ಲ. ಏಲ್ಲರಿಗೂ Amy Winehouse ಬೇಕು.

ಅವಳ ಗ೦ಡನ ನೋಡಲು ಆಕೆ ಜೈಲಿಗೆ ಹೋದದ್ದು ಸುದ್ದಿ. ಹೋಗುವಾಗ ಧರಿಸಿದ ಉಡುಗೆ ಸುದ್ದಿ. ಮೆಟ್ಟಿದ ಚಪ್ಪಲಿ ಸುದ್ದಿ. ಕುಡಿದ ನೀರು ಸುದ್ದಿ. ಗ೦ಡನ ವಿರಹದ ನೆಪದಲ್ಲಿ ಸಾರಾಯಿಯಲ್ಲಿ ಮುಳುಗಿದ್ದು ಸುದ್ದಿ. ಮತ್ತೆ ಕೋಕೇನಿನಲ್ಲಿ ತೇಲಿದ್ದು ಸುದ್ದಿಯೋ ಸುದ್ದಿ. ಮಧೈ ಬಿಡುವಿನಲ್ಲಿ ಅವಳೆೇನಾದರೂ ಹಾಡಿದರೆ ಅದರದೊ೦ದಿಷ್ಟು ಸದ್ದು! ಪಡ್ಡೆ ಪತ್ರಿಕೆಗಳಿಗೆ ಈ ಗುಲ್ಲೆಲ್ಲ ಸುದ್ದಿ. BBCಯ೦ತ ಚಾನೆಲ್ಲುಗಳಿಗೆ ಆ ಗುಲ್ಲಿನ ವಿಮರ್ಶೆಯೇ ಸುದ್ದಿ.

ಒಟ್ಟಾರೆ ಎಲ್ಲರಿಗೂ ಅವಳು ಬೇಕು. ಯಾರಾಕೆ?

ಅವಳಿಗೆ ೨೦ರ ಮೇಲಿಷ್ಟು ವರ್ಷ. ಮುಖ ಈಗಲೇ ೫೦ರ ಹಾಗಿದೆ. ದೇವರು ಒಳ್ಳೆಯ ಕ೦ಠ ನೀಡಿದ್ದಾನೆ. ಕತ್ತಿನ ಮೇಲಿನ ತಲೆಯಲ್ಲೊ೦ದಿಷ್ಟು ಬುದ್ದಿ ತು೦ಬುವಾಗ ಬಹಳ ಚೌಕಾಸಿ ಮಾಡಿದ್ದಾನೆ. ಅ೦ಥದೇ ಗ೦ಡನನ್ನೂ ನೀಡಿದ್ದಾನೆ. ಯಾವ್ದೋ ಕೋಕಿನ ತ೦ಟೆಯಲ್ಲಿ ಸಿಕ್ಕ ಅವಳ ಗ೦ಡನೀಗ ಸೆರೆಮನೆಯಲ್ಲಿ ‘ಸುಧಾರಿಸು’ತ್ತಿದ್ದಾನೆ.

ಅವಳ ಕ೦ಠದಿ೦ದ ಸುಮಾರು ಜನ ದುಡ್ಡು ಮಾಡ್ಕೊ೦ಡಿದ್ದಾರೆ. ಅವಳ ಜೀವನದ ‘ಸ್ಟೈಲ್’ನಿ೦ದ ಇನ್ನೂ ಸಾವಿರಾರು ಜನ ದುಡ್ಡು ಮಾಡ್ಕೋತಿದಾರೆ. ಅವಳು ಕುಡಿಯೋದ್ ಬಿಟ್ಟು, ಕೋಕೇನನ್ನ ದೂರ ಇಟ್ಟು ಬರೀ ಹಾಡ್ಕೊ೦ಡಿದ್ರೆ? ಛೆ! ಎಷ್ಟು loss!

Amy Winehouseಗೆ ಆ ಚಟಗಳನ್ನೆಲ್ಲ ಬಿಡಿಸೊ, ಬುದ್ದಿ ಹೇಳೊ ಜವಾಬ್ದಾರಿ-ಉಸಾಬರಿ ಯಾರಿಗ್ಬೇಕು? ಬೇಕಾದ್ ಮಾಡೋ ಸ್ವಾತ೦ತ್ರ್ಯ ಅವಳಿಗಿದೆ. ಮತ್ತೆ ಅದನ್ನೆಲ್ಲ ಚಾಚೂ ತಪ್ಪದೆ ಹೇಳೋ ಸ್ವೇಚ್ಛೆ ಮಾಧ್ಯಮಕ್ಕಿದೆ. ಅವಳು ಕುಣೀತಾಳೆ, ಇವರು ತೋರಿಸ್ತಾರೆ. ನೋಡೋರ್ಗೇನು ಕಮ್ಮಿ? ಬಾಯ್ ಬಿಟ್ಕೊ೦ಡ್ ಕಾಯ್ತಾ ಇದಾರೆ.. ಸಾಯೊದೆಲ್ರ ಕರ್ಮ. ಒ೦ದಲ್ಲ ಒ೦ದಿನ ಸಾಯೊದೇ ತಾನೇ!

ಇ೦ಗ್ಲೆ೦ಡಲ್ಲಿ ಇವಳ ಹುಚ್ಚು. ಅತ್ತ ಅಮೇರಿಕಾದಲ್ಲಿ Britney Spears ಅನ್ನೋಳಿಗ್ಹಿಡಿದ ಹುಚ್ಚೂ ಜನಕ್ಕೆ ಮನರ೦ಜನೆ.

ಕೆಸ್ರಲ್ ಬಿದ್ದೋರಿಗೆ ಆಳಿಗೊ೦ದು ಕಲ್ಲು ಅ೦ತಾ ಅಜ್ಜ ಹೇಳ್ತಿದ್ದ ಗಾದೆಯ ಕೆಸರು, ಕಲ್ಲಿನ ಆಕಾರ-ಗಾತ್ರ ಇನ್ನೆಷ್ಟು ಬದಲಾಗಲಿಕ್ಕಿದೆಯೋ?

Wednesday 30 January 2008

ಅವನ ಕಿಟಕಿ

ಸೂರ್ಯನ ಬೆಳಕನ್ನೇ ಕಾಣದ Intensive Care Unitನಿ೦ದ ಹೊರ ಬ೦ದದ್ದು ರಿಜ್ವಾನನಿಗೆ ಹೊಸ ಜೀವ ಕೊಟ್ಟಹಾಗಿತ್ತು. ಅದೃಷ್ಟಕ್ಕೆ ದೊಡ್ಡ ಕಿಟಕಿಯ ಪಕ್ಕದ ಮ೦ಚ ಈ ಬಾರಿ ಅವನ ಪಾಲಿಗಿತ್ತು. ಕೆಟ್ಟ ಚಳಿಗೆ ಮುರುಟಿದ್ದ ಮರ-ಗಿಡಗಳೆಲ್ಲ ಮತ್ತೆ ಚಿಗುರೊಡೆಯುವ ತೆಳು ಬಿಸಿಲಿನ ಕಾಲ. ಅರ್ಧ ಕಿಟಕಿಯ ತು೦ಬ ಕಣ್ಣಳತೆಯ ದೂರದ ಸಮುದ್ರ. ಮತ್ತರ್ಧ ಬಿಳಿ ಮೋಡದ ತಿಳಿ ನೀಲಿ ಆಗಸ. ಆದಷ್ಟೂ ಕಣ್ಣರಳಿಸಿ ರಿಜ್ವಾನ ತನ್ನ ಪಾಲಿನ ಸೊಬಗನ್ನೆಲ್ಲಾ ತು೦ಬಿಕೊ೦ಡ.

‘ರಿಜ್ವಾನ್’ . ಹೆಸರು ಕೇಳಿದ ವಿದ್ಯಾರ್ಥಿಯೊಬ್ಬನಿಗೆ ಉತ್ತರಿಸಿದ. ಉಳುಕಿ ಎಡಕ್ಕೆ ತಿರುಗಿದ್ದ ತನ್ನ ಕತ್ತನ್ನು ಹೆಸರು ಕೇಳಿದ ದನಿಯತ್ತ ತಿರುಗಿಸುವ ಅವನ ಪ್ರಯತ್ನ, ಕಣ್ಣಲ್ಲಿಷ್ಟು ನೋವಿನ ನೀರನ್ನಷ್ಟೇ ತ೦ತು. ಅದನ್ನರಿತವನ೦ತೆ ಆ ವಿದ್ಯಾರ್ಥಿ ರಿಜ್ವಾನನ ಕಣ್ಣೋಟದಿದಿರಿಗೆ ಬರುತ್ತಾ ‘ಜೇಮ್ಸ್ ‘ ಎ೦ದು ತನ್ನನ್ನು ಪರಿಚಯಿಸಿಕೊ೦ಡ. ಇನ್ನರ್ಧ ಘ೦ಟೆಯಲ್ಲಿ ಬರುವವರಿದ್ದ ಹಿರಿಯ ವೈದ್ಯರೊಬ್ಬರಿಗೆ ರಿಜ್ವಾನನ ಖಾಯಿಲೆಯ ಕಥೆಯೊಪ್ಪಿಸುವದು ಅವನ ಅ೦ದಿನ ಕೆಲಸ. ತನ್ನ ಪುಸ್ತಕವೊ೦ದನ್ನು ತೆರೆದು ಅದರಲ್ಲಿ ಪಟ್ಟಿ ಮಾಡಿದ್ದ ಪ್ರಶ್ನೆಗಳನ್ನ ಒ೦ದೊ೦ದಾಗಿ ಕೇಳತೊಡಗಿದ. ಅವನ ಅರಿವಿಗೆ ನಿಲುಕಿದ್ದಿಷ್ಟು:

ರಿಜ್ವಾನನಿಗೆ ೨೦ನೇ ವಯಸ್ಸಿಗೆ ತಾಕಿದ ನರಮ೦ಡಲದ ಯಾವುದೋ ಅಪರೂಪದ ಖಾಯಿಲೆ ವಯಸ್ಸು ಮೂವತ್ತಾದರೂ ಕಾಡ್ತಾ ಇದೆ. ಅದರಿ೦ದ ಮೂತ್ರ ಕಟ್ಟಿ , ವಿಸರ್ಜನೆಗೆ೦ದು ಹಾಕಿಟ್ಟಿದ್ದ ಮೂತ್ರ-ಕೊಳವೆಗೆ ನ೦ಜು ತಾಗಿ, ಮೊದಲೇ ಎರಡು ಕೋಲು ಹಿಡಿದು ನಡೆಯುತ್ತಿದ್ದ ರಿಜ್ವಾನನ ಕಾಲುಗಳು ಸ೦ಪೂರ್ಣ ಬಲಹೀನವಾಗಿವೆ. ಅರೆಜೀವವಾಗುವ ಮುನ್ನ ಅವನೊಬ್ಬ ಸೈಕಲ್-ಓಟದಲ್ಲಿ ದೇಶವನ್ನು ಪ್ರತಿನಿಧಿಸುವ ಎತ್ತರಕ್ಕೆ ಬೆಳೆದಿದ್ದ ಕ್ರೀಡಾಳು ಎ೦ದೆಲ್ಲಾ ಬರೆದೇ ಬರೆದ.

ಸಮಯಕ್ಕೆ ಸರಿಯಾಗಿ ಬ೦ದ ಹಿರಿಯ ವೈದ್ಯರಿಗೆ ತನ್ನರಿವಿನ ಅಷ್ಟೂ ಕಥೆ ಬಿಡದೆ ಹೇಳಿದ. ರಿಜ್ವಾನನ ಈ ದುಸ್ಥಿತಿಗೆ ಕಾರಣವೇನಿರಬಹುದೆ೦ಬ ಅವರ ಪ್ರಶ್ನೆಗೆ ಮೇಲಿನ ಗೋಡೆಯಲ್ಲೂ, ಕೆಳಗಿನ ಬೂಟಿನೊಳಗೂ ಉತ್ತರ ಸಿಗದೆ ತತ್ತರಿಸುತಿದ್ದ ಅವನನ್ನ ನೋಡೊಮ್ಮೆ ನಕ್ಕು, ಅವರೇ ಮು೦ದುವರೆಸಿದರು.

ಮಲ್ಟಿಪಲ್ ಸ್ಕಿ್ಲರೋಸಿಸ್. ಮೆದುಳಿನ ನರತ೦ತುಗಳೆಲ್ಲಾ ರಕ್ತಕಣಗಳ ದಾಳಿಗೆ ಸಿಕ್ಕು ಮೇಣವಾಗಿ ಗಟ್ಟಿಯಾಗುವ ಅಪರೂಪದ ಆದರೆ ಬಹಳ ಆಘಾತಕಾರಿಯಾದ ಖಾಯಿಲೆ. ಯೌವನ ಮತ್ತು ನಡು ಜೀವಿಗಳನ್ನು ಕಾಡುವ ಈ ದುಸ್ಥಿತಿ ಒ೦ದೋ ನಿಧಾನವಾಗಿ ಉಲ್ಬಣಿಸುತ್ತಾ ಹೋಗುತ್ತದೆ ಅಥವಾ ಆಗಾಗ್ಗೆ ಬ೦ದು ನೆನಪು ಮಾಡುತ್ತಾ ಕಾಡುತ್ತದೆ. ಪ್ರತಿ ಬಾರಿ ಕಾಡಿದಾಗಲೆಲ್ಲ, ಕೈಯೊ, ಕಾಲೊ, ಕಣ್ಣೋ ಯಾವುದಾದರ ಬಲವನ್ನಿಷ್ಟು ತಿ೦ದು ಹಾಕುತ್ತದೆ. ಇದು ಕಾಣಿಸಿಕೊ೦ಡ ಒ೦ದಿಷ್ಟು ವರ್ಷಗಳಲ್ಲಿ ಗಾಲಿ ಕುರ್ಚಯ ದಾಸರಾಗುವದು ಇವರ ದುರಾದೃಷ್ಟ. ಔಷಧಗಳು ಈ ರೋಗದ ಲಕ್ಷಣಗಳನ್ನ ಒ೦ದಿಷ್ಟು ತಣಿಸಿದರೂ, ನಿವಾರಣೆ ಮಾಡಲಾರವು.....

ಹೀಗೆ ಹೇಳ್ತಾನೆ ಹೋದ್ರು ಆ ಹಿರಿಯ ವೈದ್ಯರು. ಆ ವಿದ್ಯಾರ್ಥಿಗಳಲ್ಲಿ ಯಾರಾದ್ರೂ ಸ೦ಶೋಧಕರಾಗಿ ಹೊಸ ಔಷಧಿ ಕ೦ಡುಹಿಡಿವರೇ? ಒ೦ದು ಹುಚ್ಚು ಪ್ರಶ್ನೆ ರಿಜ್ವಾನನ ಗೊ೦ದಲಮಯ ಮನಸ್ಸಿನೊಳಗೆ ಹೊಸದಾಗಿ ಪ್ರವೇಶಿಸಿ ಕೊರೆಯಲಾರ೦ಭಿಸಿತು.

ಕಿಟಕಿಯ ಹೊರಗೆ ಬಣ್ಣ-ಬಣ್ಣದ ಗಾಳಿಪಟವೆರಡು ತಾ ಮೇಲೆ-ನಾ ಮೇಲೆ ಎ೦ದು ಮುಗಿಲಿನತ್ತರ ಹಾರುತಿದ್ದವು. ಗಾಳಿಪಟಗಳ ಸೂತ್ರ ಹಿಡಿದ ಪುಟ್ಟ ಕೈಗಳ ಕಲ್ಪನೆಗೆ ರಿಜ್ವಾನನ ನೆನಪಿನ೦ಗಳ ಕಲುಕಿ ಕಣ್ತು೦ಬಿತ್ತು. ಕಣ್ಣು ತಾನಾಗೇ ಮುಚ್ಚಿತ್ತು. ಹಳೆಯ ಸೈಕಲ್ಲೊ೦ದು ದೂಡಿದಷ್ಟೂ ಕಣ್ಣ ಮು೦ದಿ೦ದ ಬೀಳದೇ ಕಾಡತೊಡಗಿತ್ತು. ಕಣ್ಣನ್ನು ಇನ್ನಷ್ಟು ಗಟ್ಟಿಯಾಗಿ ಮುಚ್ಚಿದ. ತು೦ಬಿದ ಕಣ್ನಿನಿ೦ದ ಹರಿದ ಹನಿ ಸಾಲು ಒರಟು ಕೆನ್ನೆಯಿ೦ದಿಳಿದು ನೋವಿನ ಕುತ್ತಿಗಯ ಸವರಿ ಸಾ೦ತ್ವನ ಹೇಳಿತು.

Saturday 26 January 2008

ಬೇಡ-ಬೇಕುಗಳ ನಡುವಿನ ಬದುಕು

ಮುಗ್ದ ಮನಸುಗಳ ನೋವಿಗೆ ಮಿಡಿದ ಮನವೊ೦ದಕ್ಕೆ(http://chendemaddale.wordpress.com/2008/01/24/ಸೂಜಿಗಳದ್ದೇ-ಬದುಕು/#comment-37) ಸಾ೦ತ್ವನದ ಒ೦ದೆರಡು ಮಾತು.

ಉತ್ತಮ ಬರಹ. ಓದಿ ನನಗನ್ಸಿದ್ದಿಷ್ಟು.

ಕುಣಿದಷ್ಟೂ ಬೆಳೆಯುವ-ಹಾರುವ ಪುಟ್ಟ ಮನಸುಗಳನ್ನ ಲೆಕ್ಕದ ಆಟ-ಊಟ-ಸೂಜಿಗಳಲಿ ಚುಚ್ಚಿ ಕಾಡುವ 'ಮಧು ಮೇಹ' ದೇಹವನ್ನ ಸುಡುವದಕ್ಕಿ೦ತಲೂ, ಮನಸಿಗೆ ಘಾಸಿ ಮಾಡಿದಾಗಿನ ಅಪಾಯ ಹೆಚ್ಚು ಕೆಟ್ಟದು. “...ತಿನ್ನಬೇಡ,....ಆಡಬೇಡ,....ನೋಡಬೇಡ,....ಬೇಡ...ಬೇಡ...” ಹೀಗೆಲ್ಲ ಪ್ರತಿ ಕ್ಷಣವೂ ಕಾಡುವ ‘ಬೇಡ’ ಗಳಲ್ಲಿ ಕುಗ್ಗುವ ಬದುಕಿಗೆ, Insulinನ ಸೂಜಿ (ಒ೦ದರ್ಥದಲ್ಲಿ) ಯಾವ ಲೆಕ್ಕವೂ ಅಲ್ಲ. ವಿಪರ್ಯಾಸವೆ೦ದರೆ, ಈ ಎಲ್ಲಾ ‘ಬೇಡ’ ಗಳಿ೦ದ ಒ೦ದಿಷ್ಟು ಬಿಡುವು ದೊರೆಯುವದೇ Insulinನಿ೦ದ!

Eat What You Like And Like What You Eat ಎ೦ದು ಸಕ್ರೆ ವೈದ್ಯರುಗಳು ಹೇಳಲಿಕ್ಕೆ ಶುರುಮಾಡಿ ಹತ್ತು ವರ್ಷದ ಮೇಲಾಯ್ತು. ಒಮ್ಮೆ ಚುಚ್ಚಿಕೊ೦ಡರೆ ೨೦-೨೪ಘ೦ಟೆ ಕೆಲಸ ಮಾಡುವ Insulinಗಳು, ಊಟ-ತಿ೦ಡಿಯ ಲೆಕ್ಕಕ್ಕೆ ತಾಳೆ ಹಾಕಿ ತೆಗೆದು ಕೊಳ್ಳುವ೦ತ- ಕೆಲ ನಿಮಿಷಗಳಲ್ಲೇ ಕೆಲಸ ಶುರು ಮಾಡುವ ಹೊಸ ಬಗೆಯ Insulinಗಳು ಇವೆಲ್ಲ ‘ಬೇಡ’ಗಳನ್ನು ಬಿಟ್ಟು ‘ಬೇಕು’ಗಳತ್ತ Insulin-ಅವಲ೦ಬಿತ ಜೀವಗಳನ್ನು ಕರೆದೊಯ್ಯುತ್ತಿವೆ.

ಇದಕೆಲ್ಲ ಬ್ರೇಕ್ ಹಾಕ್ತಿರೋದು, ಅಮ್ಮ-ಅಪ್ಪ೦ದಿರ ಅರೆಜ್ಞಾನ. ‘ಚಾಕೊಲೆಟ್-ಹೊಟ್ಟೆ ಹುಳ’ ಇದು ಸರ್ವ ವ್ಯಾಪಿ! ಸಕ್ರೆ ಖಾಯ್ಲೆಗಷ್ಟೇ ಅ೦ಟಿದ ರೋಗವಲ್ಲ ಅದು. Diabetes ಬದುಕಿನುದ್ದಕ್ಕೂ ಬೆನ್ನಿಗ೦ಟಿದ ‘ಮಿತ್ರ’. ನಾಲಿಗೆಗೆ ಬೀಗ ಹಾಕೊ೦ಡ್ ಬದುಕೋದ್ ಕಷ್ಟ. ಯಾವ್ದನ್ನೂ ‘ಬೇಡ’ ಅನ್ನಬೇಕಾಗಿಲ್ಲ. ದೇಹಕ್ ಒಳ್ಳೇದು ಅನ್ಸಿದ್ದನ್ನೆಲ್ಲಾ ತಿನ್ನ ಬಹುದು, ಎಲ್ಲರ೦ತೆ. ಹಣ್ಣುಗಳಿ೦ದೇನೂ ಮೋಸ ಇಲ್ಲ. ದು೦ಡಗಿರೋ ಗಟ್ಟಿ ಹಣ್ಣುಗಳು (ಸೇಬು, ಪೇರಲೆ..) ಉತ್ತಮ. ಸಪೋಟ, ಸಿಹಿ ಮಾವು, ಬಾಳೆ ಹಣ್ಣಿನಲ್ಲಿ ರೆಡಿ ಸಕ್ರೆ ಹೆಚ್ಚು. ಮಿತಿ ಯಲ್ಲಿ ತಿ೦ದ್ರೆೆೇನೂ ತೊ೦ದ್ರೆ ಇಲ್ಲ. ಕರಿದದ್ದು, ಸಿಹಿ ಪಾಕದಲದಿ್ದದ್ದನ್ನೆಲ್ಲಾ ತಿ೦ದಾಗ Insulinನ ಲೆಕ್ಕ ಹೆಚ್ಚು! ಹಾಗೇ ಒ೦ದ್ಸುತ್ ಹೆಚ್ ಓಡ್ಲಿಲ್ಲಾ೦ದ್ರೆ ಹೊಟ್ಟೆ ಸುತ್ ಹೆಚ್ಚಾಗೋದೂ ಖ೦ಡಿತಾ! ನಾನ್ ಏನ್ ಬಿಟ್ಟೆ? ಚಿಪ್ಸ್, ಚಕ್ಕುಲಿ, ಪೂರಿ, ಕೋಲ..........ಇದನೆಲ್ಲ ಹೆಚ್ಚು ತಿನ್ನೋರ್ ಯಾರ್ ಹೇಳಿ? ದೇಹಕೆ ಬೊಜ್ಜು-ಮನಸಿಗೆ ಕೊಬ್ಬು ಎರಡೂ ಒಳ್ಳೇದಲ್ಲ ಅನ್ನೋದು ತಿಳಿದೇ ಇರೋರ್ ಯಾರ್ ಹೇಳಿ?

ಬದುಕು ಬೇಕು. ಪ್ರೀತಿಸಿ ಅದನ ಬದುಕ ಬೇಕು. ಮನಪೂರ್ತಿ ಪ್ರೀತಿಯ ಬದುಕ ಸವಿಯಬೇಕು. ಇದಕೆಲ್ಲ ಸಿಹಿಯ ಸವಿ ಬೇಡವೆ೦ದರೆ ಹೇಗೆ? ಇಷ್ಟು ತಿಳುವಳಿಕೆ ಇದ್ದಲ್ಲಿ ಬೇಡವಾಗೋದು ‘..ಬೇಡ’ ಗಳು ಮಾತ್ರ. ಒಟ್ಟಾರೆ, ‘ಕೊ೦ಚ ತಿನ್ನಿ-ಹ೦ಚಿ ತಿನ್ನಿ’ ಎನ್ನೋ ಮಾತು ನೆನಪಿದ್ರೆ ದೇಹಕ್ಕೆ ಮತ್ತು ಮನಸಿಗೆ ಯಾವತ್ತೂ ಹಿತ.

Saturday 12 January 2008

ನನ್ನ ಅ೦ಗಳದ ನಕ್ಷತ್ರ....

ನನ್ನ ಅ೦ಗಳದ ನಕ್ಷತ್ರ...

ಕೆ೦ಪು ರವಿಯ ಕಿರಣ ಮೂಡಿ
ತೋಟವೆಲ್ಲಾ ಹಸಿರ ಮಾಡಿ
ಅರಳಿ ನಗುವ ಹೂವ ಮೋಡಿ
ಮಣ್ಣಲಾಡುತ ಕುಣಿವ ಗೆಜ್ಜೆ
ಬೆಳೆಯುತಿರುವ ಪುಟ್ಟ ಹೆಜ್ಜೆ
ನೂರು ಬಣ್ಣದ ಮನದ ಚಿತ್ರ
ತು೦ಬಲಿರುವದು ನನ್ನ ಹತ್ರ
ಅದು ನನ್ನ ಅ೦ಗಳದ ನಕ್ಷತ್ರ...

ರವಿಯು ತಾನೆ ನಿದ್ದೆ ಮಾಡಿ
ಚ೦ದ್ರನೆಲ್ಲೋ ಪಕ್ಕ ಓಡಿ
ತಾರೆ ನೂರ ಮರೆಯ ಮಾಡಿ
ಸುರಿವ ನೀರ ಇರುಳಿನಲ್ಲೂ
ಒದ್ದೆ ಮನವ ಬೆಚ್ಚಗಿಟ್ಟು
ನಾಳೆ ನೋಟಕೂ ಬೆಳಕನೀವ
ಹೊಳವ ಕ೦ಗಳ ಮನದ ಮಿತ್ರ
ಅದು ನನ್ನ ಅ೦ಗಳದ ನಕ್ಷತ್ರ.....

ನಿನ್ನೆ-ನಾಳೆ ಎಣಿಕೆಯಲ್ಲಿ
ಕಳೆವ ಇ೦ದಿನ ಪಯಣದಲ್ಲಿ
ಬೆಳೆವ ಬದುಕ ಗುರಿಯು ಎಲ್ಲಿ?
ಕೊರಳ ಸುತ್ತಲು ಪುಟ್ಟ ಕಾಲ್ಗಳು
ಕೈಯ ಹಿಡಿಯಲು ಪುಟ್ಟ ಬೆರಳು
ನಲಿವ ಮೊಗವ ಹೊತ್ತ ಹೆಗಲಿಗೆ
ನೂರು ದಾರಿಯ ತಿಳಿಸೊ ಸೂತ್ರ
ಅದು ನನ್ನ ಅ೦ಗಳದ ನಕ್ಷತ್ರ......
(೧೨.೦೧.೦೮)

ವಾತ್ಸಾಯನರೂರಿನಲ್ಲಿ ಐದು ರಾತ್ರಿ - ೫

ರಾತ್ರಿ ೫ - ಸ್ನೇಹ ಸಿ೦ಚನ

ಮು೦ಜಾನೆ ಮತ್ತೆ conference. ಒ೦ದೆರಡು ಪ್ರಬ೦ಧಗಳನ್ನು ಕೇಳಿ ಹೊರಬ೦ದೆ. ಹಳೆಯ ಗುರುಗೊಳಬ್ಬರು ಸಿಕ್ಕರು. ಜೀವನದಲ್ಲೂ, ವಿದ್ಯೆಯಲ್ಲೂ ಅನುಭವಿಗಳು. ಮಾತಿಗೆ ಸಿಕ್ಕಿದ್ದು ಒಳ್ಳೆಯದೇ ಆಯ್ತು. ಇಬ್ಬರೂ ವ್ಯಾನ್ ಗೊಹ್ ಮ್ಯುಸಿಯ೦ನತ್ತ ಹೊರಟೆವು.

ವಿನ್ಸೆ೦ಟ್ ವ್ಯಾನ್ ಗೊಹ್ ತು೦ಬಾ ವಿಚಿತ್ರ ವ್ಯಕ್ತಿ. ತನ್ನ ಮೂವತ್ತೆಳನೇ ವಯಸ್ಸಿಗೆ ತನ್ನನು ತಾನು ಕೊ೦ದುಕೊ೦ಡ. ಅವನ ಸಾವಿನ ನ೦ತರ, ಅವನ ಅಣ್ಣ ಅತ್ತಿಗೆಯ ಪ್ರಯತ್ನದಿ೦ದ ಅವನು ಪ್ರಸಿದ್ದಿಗೆ ಬ೦ದದ್ದು. ಅವನ ಬಣ್ಣಗಳ ಬಳಕೆ ನೋಡುವವರಿಗೇ ಹುಚ್ಚು ಹಿಡಿಸುತ್ತೆ. ಅವನ ಅತ್ಯ೦ತ ಪ್ರಸಿದ್ದವಾದ ಸೂರ್ಯಕಾ೦ತಿ ಹೂ ಗುಛ್ಛದ ನಕಲೊ೦ದನ್ನು ಖರೀದಿಸಿದೆ.

ಅಲ್ಲಿಯೇ ಪಕ್ಕದಲ್ಲಿದ್ದ, ವಜ್ರದ ಮ್ಯುಸಿಯ೦ಗೂ ನುಗ್ಗಿದೆವು. ಇಲ್ಲಿನವರು ವಜ್ರದ ಕಸುಬಿನಲ್ಲಿ ನುರಿತವರು. ಕೊಹಿನೂರಿಗೂ ಹೊಳಪಿಟ್ಟಿದ್ದು ಇವರೇ ಅ೦ತೆ. ನನ್ನ ಗುರುಗಳು ಅವರ ಹೆ೦ಡತಿಗೆ ಸ್ವರೋಸ್ಕಿ ಹರಳಿನ ಹಾರವೊ೦ದನ್ನು ತೆಗೆದುಕೊ೦ಡರು. ನಾನು ಸುಮ್ಮನೆ ಎಲ್ಲವನ್ನೂ ನೋಡಿದೆ. ಅವರೂ ಅನುಭವಿಗಳು. ನನ್ನನ್ನೇನೂ ಕೇಳಲಿಲ್ಲ.

ಸ೦ಜೆ, ಗು೦ಪಿನೊಟ್ಟಿಗೆ ಊಟಕ್ಕೆ ಹೊರಟೆ. ಹೊಸ ಪರಿಚಯದ ಹಲವು ಜನ. ಎರಡನೇ, ಮೂರನೇ ಪ್ರಶ್ನೆಯೇ ಸ೦ಸಾರದ ಕಥೆ. ಅವರವರ ಹೆ೦ಡತಿ ಮಕ್ಕಳ ಬಗ್ಗೆ ಹೇಳಿಕೊಳ್ಳುವದು ಅಭಿಮಾನದ ವಿಷಯ ಅಲ್ಲವೇ? ನಾನು ಏನು ಹೇಳಿಕೊಳ್ಳಲಿ?

ದೇವರನ್ನೇ ನ೦ಬದ, ಎಲ್ಲಾ ತರದ ಜನರನ್ನೂ ಒಪ್ಪಿಕೊ೦ಡಿರುವ, ಕಳ೦ಕ ಎ೦ದು ಬೇರೆಯವರು ತಿಳಿದಿದ್ದನ್ನೂ ಅನಿವಾರ್ಯತೆ ಎ೦ದು ಒಪ್ಪಿಕೊ೦ಡು ಮೆರೆಸುತ್ತಿರುವ ಮುಕ್ತ ಸಮಾಜದ ನೆಲದಲ್ಲಿ ಕುಳಿತೂ ಈ ಪ್ರಶ್ನೆ? ನನಗೇ ನಗು ಬ೦ತು.

ಈ ಭಾವನೆಗಳಿಗೆ ರೂಪ-ಆಕಾರ ಕೊಟ್ಟು ಭಾಷೆಯ ಚೌಕಟ್ಟಿನಲ್ಲಿ ಕಟ್ಟಿಟ್ಟರೆ ಅದೇ ಕಥೆಯಲ್ಲವೇ?

--------
ಆರನೆಯ ದಿನ ಬೆಳಗ್ಗೆ conferenceನ ಕೊನೆಯ ದಿನದ ಪ್ರಬ೦ಧಗಳನ್ನೆಲ್ಲ ತಲೆಗೆ ತು೦ಬಿಕೊ೦ಡು, ಗು೦ಜಿಸಿದ್ದ ಬ್ಯಾಗ್‌ಗಳಲ್ಲಿ ದೊರಕಿದ್ದ ಗಿಫ್ಟ್‌ಗಳನ್ನೂ, ಕೊ೦ಡುಕೊ೦ಡಿದ್ದ ಪೈ೦ಟಿ೦ಗ್‌ಗಳನ್ನು ತು೦ಬಿಕೊ೦ಡು ಆಮ್ಸ್ಟೆರ್ಡಾಮ್‌ಗೆ ಬೈ-ಬೈ ಹೇಳಿ ಮತ್ತೆ ಮನೆಯತ್ತ ಪಯಣ ಆರ೦ಭಿಸಿದೆ. ರ್‍ಐಕ್ ಮ್ಯುಸಿಯ೦ನಲ್ಲಿದ್ದ ಕ್ಯೂಪಿಡ್ (ಗ್ರ್‍ಈಕರ ಕಾಮದೇವ!)ನ ಅಮೃತಶಿಲೆಯ ಮೂರ್ತಿಯ ಕೆಳಗೆ ಬರೆದಿದ್ದ ಸಾಲುಗಳು ಇನ್ನೂ ಮನಸ್ಸನ್ನು ಬಿಡುತ್ತಿಲ್ಲ. He is your master. That he was, he is and and he will be. ಎಲ್ಲಾ ಕಾಲಕ್ಕೂ ಸತ್ಯ. ಅಲ್ಲವೇ?

ವಾತ್ಸಾಯನರೂರಿನಲ್ಲಿ ಐದು ರಾತ್ರಿ - ೪

ರಾತ್ರಿ ೪ - ಪ್ರಕೃತಿಯ ಆಲಿ೦ಗನ

ಬೆಳಗ್ಗೆ ಎದ್ದಾಗ ಸಮಯ ಹತ್ತಕ್ಕೆ ಹತ್ತಿರವಾಗಿತ್ತು. ಹೊರಗೆ ಸೂರ್ಯನ ಬಿಸಿಲು ಜೋರಾಗಿತ್ತು. ಇದೇ ಅವಕಾಶ ಎ೦ದೆಣಿಸಿ ಸೈಕಲ್ ಸವಾರಿಗೆ ಹೊರಟೆ. ಬಾಡಿಗೆ ಎರಡು ಗ೦ಟೆಗೆ ೫ ಯೂರೊ. ಇಡೀ ದೇಶವೇ ಸಮತಟ್ಟಾದ ಭೂಮಿ. ಎಷ್ಟು ದೂರ ಬೇಕಾದರೂ ಸೈಕಲ್ ತುಳಿಯಬಹುದು. ಆಮ್ಸ್ಟೆರ್ಡಾಮ್‌ನಲ್ಲಿ ಸೈಕಲ್ಲಿಗೆ ರಾಜ ಮರ್ಯಾದೆ. ಅವುಗಳಿಗೇ ಪ್ರತ್ಯೇಕ ಲೇನ್‌ಗಳು ಮತ್ತು ಸಿಗ್ನಲ್‌ಗಳು. ಹೆಚ್ಚು ಜನ ಸೈಕಲ್ಲನ್ನೆ ಬಳಸುವದರಿ೦ದ, ಅನುಕೂಲಕ್ಕೆ ತಕ್ಕ೦ತೆ ಸೈಕಲ್ ರೂಪಾ೦ತರ ಹೊ೦ದಿದೆ. ಸಾಮಾನು ಸಾಗಿಸಲು, ಮಕ್ಕಳನ್ನು ಕುಳಿಸಿಕೊಳ್ಳಲು ಮು೦ದೊ೦ದು ಬುಟ್ಟಿ-ಸುಮಾರು ದೊಡ್ಡ ಗಾತ್ರದ್ದು. ನಾವೇಕೆ ಸೈಕಲ್ಲನ್ನು ಮರೆತೆವು? ಸೈಕಲ್ಲಿಗೂ-ಬಡತನಕ್ಕೂ ನ೦ಟುಹಾಕಿ ಅಲ್ಲವೇ?

ಸೈಕಲ್ ಸವಾರಿ ಅದೆಷ್ಟು ಹಳೆ ನೆನಪನ್ನು ತಾಜಾ ಮಾಡ್ತದೆ. ನನ್ನ ಮೊದಲ ಸೈಕಲ್ ಪಾಠ, ದೊಡ್ಡ ಸೈಕಲ್ ಮೊದಲು ತುಳಿದಾಗ ಬಿದ್ದು ಆದ ಗಾಯ, ಅಪ್ಪ ಹತ್ತಾರು ವರ್ಷ ತುಳಿದ ಸೈಕಲ್, ಅವರು ನನಗೆ ಕೊಡಿಸಿದ ಮೊದಲ ಸೈಕಲ್, ಹೀಗೆ ನೆನಪಿನ ಬುಟ್ಟಿ ತು೦ಬ್ತಾನೇ ಇತ್ತು, ನನ್ನ ಎರಡು ಗ೦ಟೆಗಳ ಸೈಕಲ್ ಯಾನ. ನನ್ನ ಹಿ೦ದೊ೦ದು ಪುಟಾಣಿ ಸೈಕಲ್‌ನಲ್ಲಿ ಬರುವವನೂ ಇದ್ದಿದ್ರೆ ಎಷ್ಟು ಚೆನ್ನಿತ್ತು. ಕಾಲವೇ ಹೀಗೆ ಅಲ್ಲವೆ? ಎಲ್ಲೊ ಒ೦ದು ಕಡೆ ನಿ೦ತು ಬಿಡುತ್ತದೆ. ನೆನಪಿನ ಬುಟ್ಟಿಯ ಹೂಗಳನ್ನು ನೋಡುತ್ತಾ, ಒಳ್ಳೆಯ ನಾಳೆಗಾಗಿ ಕಾಯಬೇಕು. ದಾರಿ ಬೇರಿಲ್ಲ.

ಮಧ್ಯಾಹ್ನ, ಹತ್ತಿರದ ಹಳ್ಳಿಗಳೆರಡಕ್ಕೆ conducted tour ಒ೦ದರಲ್ಲಿ ೩೫ ಯೂರೊ ಕೊಟ್ಟು ಹೊರಟೆ. ಸಮತಟ್ಟಾದ ಭೂಮಿ, ಕಣ್ಣೋಟದುದ್ದಕ್ಕೂ ಹಸಿರು, ದೊಡ್ದ-ದೊಡ್ಡ ಕೆರೆಗಳು, ಇವುಗಳನ್ನೆಲ್ಲ ದಾಟಿ ಚಿಕ್ಕದೊ೦ದು ಹಳ್ಳಿಯ ಮನೆಯಲ್ಲಿ ಚೀಸ್ ತಯಾರಿಸುವ ವಿಧಾನ ತೋರಿಸಿದರು. ಹಾಲನ್ನು ಒಡೆಸಲು ಸಣ್ಣ ಕರುವಿನ ಕರುಳಿನಿ೦ದ ತೆಗೆದ ರೆನೆಟ್ ಬಳಸುತ್ತಾರೆ ಎ೦ದು ಕೇಳಿ ತಿಳಿದೆ. ಸ೦ಕಟವಾಯಿತು. ಇನ್ನು ಚೀಸ್ ತಿನ್ನುವದೂ ಕಷ್ಟ.

ಪಕ್ಕದಲ್ಲೇ, ಮರದ ಷೂ ಮಾಡುವ ಮನೆ. ೭೭ ವರ್ಷದ ಅಜ್ಜರೊಬ್ಬರು ಅದನ್ನು ತಯಾರಿಸುವದು ಹೇಗೆ ಎ೦ದು ಎಲ್ಲರನ್ನೂ ನಗಿಸುತ್ತಾ ತಿಳಿಸಿದರು. ಮೊದಲನೇ ಯುದ್ಧದ ಸಮಯದಲ್ಲಿ ಬಡತನದಿ೦ದ, ಚರ್ಮದ ಪಾದುಕೆಗಳು ಕೈಗೆಟುಕದಿದ್ದಾಗ ನೆರವಿಗೆ ಬ೦ದದ್ದು ಈ ಷೂಗಳ೦ತೆ. ಈಗಲೂ ರೈತರು, ಬೆಸ್ತರು ಇದನ್ನು ಬಳಸುತ್ತಾರ೦ತೆ. ಆದರೆ, ಬಹುಪಾಲು ಖರ್ಚಾಗುವದು ಅಲ೦ಕಾರಿಕ ಷೂಗಳೇ. ನಾನೂ ಪುಟ್ಟದೊ೦ದು ಜೊತೆ ಖರೀದಿಸಿದೆ. ಪುಟ್ಟ ಪಾದುಕೆಗಳೆಷ್ಟೋ ಇರಬೇಕಿತ್ತು ನಮ್ಮ ಮನೆಯಲ್ಲಿ. ಕಾಯುವ ಸಮಯ. ಕಾಯಬೇಕು.

ಸ೦ಜೆ, ಹಿ೦ದಿರುಗುವ ದಾರಿಯಲ್ಲಿ, ಗಾಳಿ ಯ೦ತ್ರವೊ೦ದರ ಬಳಿ ಒ೦ದೆರಡು ಫೊಟೊ ಕ್ಲಿಕ್ಕಿಸಿದೆ. ನೂರು-ನೂರೈವತ್ತು ವರ್ಷಗಳಷ್ಟು ಹಳೆಯವೂ ಇನ್ನೂ ಕೆಲಸ ಮಾಡುತ್ತವೆ. ಕೆರೆಯ ನೀರನ್ನು ತೆಗೆದು ಸಮುದ್ರದತ್ತ ತಳ್ಳುತ್ತವೆ. ಹಾಗ೦ತ ನಾನು ತಿಳಿದಿದ್ದೇನೆ.

ಬೆಳಗಿನ ಸೈಕಲ್, ಸ೦ಜೆಯ ನಡೆತ ದೇಹಕ್ಕೆ ಸಾಕಷ್ಟು ದಣಿವನ್ನು ನೀಡಿದ್ದವು. ನಿದ್ರೆ ಕರೆಯದೇ ಬ೦ದು ಆವರಿಸಿತ್ತು.


ರಾತ್ರಿ ೫ - ಸ್ನೇಹ ಸಿ೦ಚನ

ವಾತ್ಸಾಯನರೂರಿನಲ್ಲಿ ಐದು ರಾತ್ರಿ - ೩

ರಾತ್ರಿ ೩ - ಭಾವ ಬ೦ಧನ

ಇ೦ದು conference ನ ನಿಜ ಆರ೦ಭ. ಮತ್ತೊಮ್ಮೆ ಟ್ರಾಮ್ ಪ್ರಯಾಣ. ದಾರಿಯಲ್ಲಿ ಕ್ಯಾಮರಾಜೊತೆ ಒ೦ದಿಷ್ಟು ಸರಸ. conferenceನ ಆರ೦ಭಿಕ ಪ್ರಬ೦ಧ ಮುಗಿಯುತ್ತಿದ್ದ೦ತೆ, ಎಲ್ಲರದ್ದೂ ಪ್ರದರ್ಶಕರ ಮಳಿಗೆಗಳತ್ತ ದೌಡು. ಹೆಚ್ಚು ಆಕರ್ಷಕ ಉಡುಗೊರೆ ಕೊಡುವ ಮಳಿಗೆಗಳಲ್ಲಿ ಉದ್ದುದ್ದ ಕ್ಯೂ! ನನಗೆ ಬೇಕಿದ್ದನ್ನು ತು೦ಬಿಕೊ೦ಡು, ಒ೦ದಿಷ್ಟು ಇತರರ ಅನುಭವ-ಪ್ರಯೋಗಗಳ ಪೋಸ್ಟರ್‌ಗಳನ್ನು ನೋಡಿಕೊ೦ಡು, ಕೋಣೆಯಲ್ಲಿ ಬ್ಯಾಗ್ ಇಟ್ಟು ಸ೦ಜೆ ಪ್ರಸಿದ್ಧ ರೈಕ್ ಮ್ಯುಸಿಯ೦ ನೋಡುವ ಯೋಚನೆಯಿ೦ದ, ಹೋಟೆಲ್ಲಿಗೆ ಹೊರಟೆ.

ಆಮ್ಸ್ತರ್ಡಾಮ್‌ನಲ್ಲಿ ನೋಡಲೇ ಬೇಕಾದ ಎರಡು ಮ್ಯುಸಿಯ೦ಗಳಿವೆ. ೧೬ರಿ೦ದ- ೨೦ನೆಯ ಶತಮಾನದ ಆರ೦ಭದವರೆಗಿನ ನೆದರ್ಲ್ಯಾ೦ಡ್‍ನ ಪ್ರಸಿದ್ಧ ಕಲಾವಿದರು ರಚಿಸಿದ ಚಿತ್ರಗಳನ್ನು - ರೈಕ್ ಮ್ಯುಸಿಯ೦ ಮತ್ತು ವ್ಯಾನ್ ಗೊಹ್ ಮ್ಯುಸಿಯ೦ನಲ್ಲಿ ಪ್ರದರ್ಶಿಸಿದ್ದಾರೆ. ಈ ಕಲಾವಿದರಲ್ಲೆಲ್ಲಾ ಅತಿ ಪ್ರಸಿದ್ಧರಾದವರು ರೇ೦ಬ್ರಾ೦ಟ್ ಮತ್ತು ವ್ಯಾನ್ ಗೊಹ್. ರೇ೦ಬ್ರಾ೦ಟನ ಕೃತಿಗಳಲ್ಲಿ ಹೆಚ್ಚಿನವು ರೈಕ್ ಮ್ಯುಸಿಯ೦ನಲ್ಲಿವೆ.

೧೬ರಿ೦ದ ೧೮ನೇ ಶತಮಾನ, ಹಾಲೆ೦ಡ್‌ನ ಚಿನ್ನದ ಯುಗ. ಅಲ್ಲಿಯ ಕಳ್ಳರೆಲ್ಲ, ಪ್ರಪ೦ಚದ ಸೊತ್ತು ಕೊಳ್ಳೆಹೊಡಿಯುವದರಲ್ಲಿ ನಿಸ್ಸೀಮರಾಗಿದ್ದರ೦ತೆ. ಸ್ವರ್ಣ ತ೦ದವರೆಲ್ಲ ಶ್ರೀಮ೦ತರು. ಅವರೇ ದೊರೆಗಳು. ಕಳ್ಳರಿಗೆಲ್ಲ ಹ೦ಚಿ ತಿನ್ನುವ ಅಭ್ಯಾಸ ನೋಡಿ. ಎಲ್ಲರೂ ಸೇರಿ ಅಧಿಕಾರ ಹ೦ಚಿಕೊ೦ಡು ದೇಶಾನ republic ಮಾಡಿದರು. ಕಳ್ಳರು ಅಧಿಕಾರಕ್ಕೆ ಬ೦ದ್ರೂ ಹ೦ಚಿ ತಿ೦ತಾರೆ. ಅಧಿಕಾರಕ್ಕೆ ಬ೦ದ ಮೇಲೆ ಕಳ್ಳರಾದವರು ಹ೦ಚಬೇಕಾದ್ದನ್ನೂ ತಿ೦ತಾರೆ! ಅಷ್ಟೇ ವ್ಯತ್ಯಾಸ.

ಅಧ್ಬುತ ಪೈ೦ಟಿ೦ಗ್‌ಗಳು. ಮನಸ್ಸನ್ನು ತು೦ಬುತ್ತವೆ. ಹಣ್ಣು,ಹೂಗಳಿ೦ದ ಹಿಡಿದು ಮನೆ-ಮನುಷ್ಯರ ವರೆಗಿನ ಪ್ರತೀ ಚಿತ್ರವನ್ನು ಮತ್ತೆ ಮತ್ತೆ ನೋಡುತ್ತಲೇ ಇರಬೇಕು ಅನಿಸುತ್ತದೆ. ಹೇಳಲಾಗದ ಯಾವುದೋ ಒ೦ದು ಭಾವ ನಮ್ಮನ್ನು ಅದರತ್ತ ಸೆಳೆಯುತ್ತೆ. ಇದಕ್ಕಿ೦ತ ಹೆಚ್ಚು ಹೇಳಲು ನನಗೆ ಗೊತ್ತಿಲ್ಲ. ಚಿತ್ರಕಲೆ ನಾನು ಮುಟ್ಟಿದ ಸೊಪ್ಪಲ್ಲ. ನನಗೆ ಚೆ೦ದ ಕ೦ಡ ಒ೦ದೆರಡು ಚಿತ್ರಗಳ ನಕಲು ಕಾಪಿಗಳನ್ನು ಖರೀದಿಸಿದೆ. ಸಮುದ್ರದ ದಡದಲ್ಲಿ ಆಡುತ್ತಿರುವ ಮಕ್ಕಳ ಚಿತ್ರವೊ೦ದು ಮನಸ್ಸಿಗೆ ತು೦ಬಾ ಹಿಡಿಸಿತ್ತು. ಅದು ಮನೆಗೆ ಬೇಕಿತ್ತು ಕೂಡ.

ನೂರಾರು ವರ್ಷ ಕಳ್ಳರು ಅಧಿಕಾರದಲ್ಲಿದ್ದುದೇ ಈ ದೇಶದ ಜನಕ್ಕೆ ಎಲ್ಲವನ್ನೂ ಒಪ್ಪಿಕೊಳ್ಳುವ ಮನೋಭಾವ ನೀಡಿತೇ? ಈ ದೇಶದಲ್ಲಿ ದೇವರನ್ನು ನ೦ಬುವವರು ಅರ್ಧಕ್ಕಿ೦ತ ಕಡಿಮೆ ಜನ. ಯಾರದ್ದು ಸರಿಯಾದ ರೀತಿ-ನೀತಿ? ಸಣ್ಣ ಪ್ರಶ್ನೆಯೊ೦ದು ಮನಸ್ಸಿನ ಮೂಲೆಯಲ್ಲಿ ಕುಟುಕಲು ಆರ೦ಭಿಸಿತು. ಸ೦ಜೆ ಹೋಟೆಲ್ಲಿನ ಹತ್ತಿರವಿದ್ದ 'ಗಾ೦ಧಿ' ರೆಸ್ಟೊರೆ೦ಟಿನ ಊಟ ಹೊಟ್ಟೆ ತು೦ಬಿಸಿತ್ತು. ಊರೆಲ್ಲ ಸುತ್ತಿ ಕಾಲೂ ದಣಿದಿತ್ತು. ನಿದ್ರೆ ಸೊ೦ಪಾಗಿ ಬ೦ದಿತ್ತು.

ರಾತ್ರಿ ೪ - ಪ್ರಕೃತಿಯ ಆಲಿ೦ಗನ

Friday 4 January 2008

ವಾತ್ಸಾಯನರೂರಿನಲ್ಲಿ ಐದು ರಾತ್ರಿ - ೨

ರಾತ್ರಿ ೨ - ದಿವ್ಯ 'ದರ್ಶನ'!

ಎದ್ದಾಗ ಗ೦ಟೆ ೭.೩೦ಆಗಿತ್ತು. ಬೇಗ ಸ್ನಾನ ಮುಗಿಸಿ ಆ smoke chamber ನಿ೦ದ ಹೊರಟೆ. ಕೆಳಗೆ ತಿ೦ಡಿ ಕೋಣೆಯಲ್ಲಿ ಒ೦ದೆರಡು ಬ್ರೆಡ್ ಚೂರು ತಿ೦ದು, ಕೋಣೆ ಬದಲಾಯಿಸಿ ಎ೦ದು ಮನವಿ ಸಲ್ಲಿಸಿ 'ಜಾತ್ರೆ' ಗೆ ಹೊರಟೆ.

ರಸ್ತೆಯಲ್ಲಿ ಮೊದಲು ಕಣ್ಣಿಗೆ ಬಿದ್ದದ್ದು, ಸೈಕಲ್‌ಗಳು ಮತ್ತು ಬಾಡಿಗೆ ಸೈಕಲ್ ಅ೦ಗಡಿಗಳು. ಮನಸ್ಸು ಹತ್ತಾರು ವರುಷ ಹಿ೦ದೆ ಓಡಿತು. ಮನಸಿನ ಓಟಕ್ಕೆ ಕೊನೆಯೆಲ್ಲಿ? ದೇಹ ವೇಗವಾಗಿ ಟ್ರಾಮ್ ನಿಲ್ದಾಣದತ್ತ ನಡೀತಿತ್ತು. ಸೈಕಲ್ಲು, ಟ್ರಾಮ್ ಗಳಲ್ಲೇ ಬಹಳಷ್ಟು ಜನ ಪ್ರಯಾಣಿಸುವದರಿ೦ದ, ಕಾರು-ಬಸ್ಸುಗಳ ಬರಾಟೆ ಕಡಿಮೆ. ಆ ಟ್ರಾಮ್‌ನಲ್ಲಿ, ಊರ ಹೊರಭಾಗದಲ್ಲಿದ್ದ, ನನ್ನ conference ಕೇ೦ದ್ರಕ್ಕೆ ೨೦ ನಿಮಿಷದ ಪ್ರಯಾಣ.

ಮೊದಲ ದಿನ ಇದ್ದದ್ದು, symposium. ಸುಲಭ ಭಾಷೆಯಲ್ಲಿ ಹೇಳಬೇಕೆ೦ದರೆ, ಔಷಧಿ ಕ೦ಪನಿಯ 'ದೇವರು'ಗಳು, ಹೇಳಲಿಕ್ಕೊ೦ದಿಷ್ಟು ಜನ, ಕೇಳಲಿಕ್ಕೊ೦ದಿಷ್ಟು ಜನರನ್ನು ಋಣಾನುಬ೦ಧದಲ್ಲಿ ಕರೆತ೦ದು, ತಮ್ಮ ಕ೦ಪನಿಯ ಔಷಧದ ವರ್ಚಸ್ಸನ್ನು ಹೆಚ್ಚಿಸುವ ವ್ಯಾಪಾರೀ ಮಾರ್ಗದ ಸು೦ದರ ಹೆಸರು. ಆದರೆ ಮಾತನಾಡುವವರು ತಮ್ಮ ವಿಚಾರಗಳಿಗೆ ಆದಷ್ಟು ನ್ಯಾಯ ಸಲ್ಲಿಸುವ ಅನುಭವಿಗಳಾದ್ದರಿ೦ದ, ಹೇಳುವ ವಿಚಾರದಲ್ಲಿ ಮೋಸವಿಲ್ಲ. ಹಾಗ೦ತ ನಾವೆಲ್ಲ ತಿಳಿದಿದ್ದೇವೆ. ಮಧ್ಯಾಹ್ನ ಅವರದ್ದೇ ಊಟ. ಮತ್ತೆ ಸ೦ಜೆಯವರೆಗೂ ಪಾಠ.

ಸ೦ಜೆ, ಒ೦ದೇ ಹೋಟೆಲ್‌ನಲ್ಲಿದ್ದ ಒ೦ದಿಷ್ಟು 'ಋಣಾನುಬ೦ಧಿಗಳು' ಸೇರಿ ಟ್ಯಾಕ್ಸಿಯಲ್ಲಿ ಹೊಟೆಲ್ಲಿಗೆ ಮರಳಿದೆವು. ಆ ಟ್ಯಾಕ್ಸಿ ಡ್ರೈವರ್, ಈಜಿಪ್ಟ್ ಮೂಲದವ. ಈ ದೇಶದಲ್ಲಿ ಎಲ್ಲಾ ಮೂಲದ ಜನರೂ ಇದ್ದಾರೆ. ಇ೦ಡೊನೇಶ್ಯಾದ ಜನ (೮%) ಇ೦ಥವರಲ್ಲಿ ಹೆಚ್ಚು. ಅವರ ಭಾಷೆಯಲ್ಲಿ ಸ೦ಸ್ಕೃತದ ದಟ್ಟ ಛಾಯೆಯಿರುವ ಕಾರಣ, 'ಇ೦ದ್ರ ಪುರ', 'ಪುಷ್ಪಿತ' ಮೊದಲಾದ ಹೆಸರಿನ ಹೊಟೆಲ್‌ಗಳು ಬಹಳಷ್ಟು ಇವೆ. ಭಾರತದ ಹೋಟೆಲ್‌ಗಳೂ ಸುಮಾರಿವೆ. ನನ್ನ ಜೊತೆಗಾರನೊಬ್ಬ ಕೇಳಿದ ತು೦ಟ ಪ್ರಶ್ನೆಗೆ, ಆ ಟ್ಯಾಕ್ಸಿ ಡ್ರೈವರ್, redlight district ಗೆ ಹೋಗುವ ಹೆಚ್ಚಿನ ಜನ ಹೊರ ದೇಶದಿ೦ದ ಬರುವ ಪ್ರವಾಸಿಗಳೆ೦ದೂ, ಅದರಲ್ಲೂ ಇ೦ಗ್ಲೆ೦ಡಿಗರೆ೦ದು ಹೇಳಿ ತಬ್ಬಿಬ್ಬು ಮಾಡಿದ.

ರಾತ್ರಿಯ ಊಟದ ವ್ಯವಸ್ಥೆಯೂ ಕ೦ಪನಿಯವರದ್ದೇ! ಗು೦ಪಿನಲ್ಲಿ ಕರ್ನಾಟಕ, ಕೇರಳದ ಒ೦ದಿಷ್ಟು ಜನ ಇದ್ದದ್ದು ಖುಷಿಯಾಗಿತ್ತು. ಊಟ ಸಾಧಾರಣ, ಮಾತೇ ಹೆಚ್ಚು. ಕುಡಿಯಲು ನೀರಿತ್ತು! ಹೆಚ್ಚಿನವರು ಸಮವಯಸ್ಕರು ಮತ್ತು ಸ೦ಸಾರಿಗಳು. ಆ ಸ೦ಜೆಯ ಮಟ್ಟಿಗೆ ಸಮಾನ ಮನಸ್ಕರೂ ಕೂಡ ಆಗಿದ್ದರು. ನಮ್ಮಲ್ಲಿ ಒಬ್ಬ, ಬರುವಾಗ ಊಟದ ಜಾಗಕ್ಕೆ ನಡೆದು ಬ೦ದಿದ್ದ. ಅಲ್ಲದೆ, ಈ ಮೊದಲೂ ಆಮ್ಸ್ಟೆರ್ಡಾಮ್ ನೋಡಿದ್ದ. ಆವನ ಮಾರ್ಗದರ್ಶನದಲ್ಲಿ, ನಾವೆಲ್ಲ ಮತ್ತೆ ಹೋಟೆಲ್ ಕಡೆಗೆ ಹೆಜ್ಜೆ ಹಾಕಿದೆವು.

ಆಮ್ಸ್ಟೆರ್ಡಾಮ್ ಕಾಲುವೆಗಳ ಊರು. ಕಾಲುವೆಗಳ ಇಕ್ಕೆಲಗಳಲ್ಲಿ ರಸ್ತೆ. ಊರಿನ ಕಾಲುವೆಗಳನ್ನೆಲ್ಲ ಅಳೆದರೆ ಸುಮಾರು ೪೦೦ ಕಿ.ಮೀ ಗಳಷ್ಟಾಗಬಹುದೆ೦ದು ಅ೦ದಾಜು. ರಸ್ತೆಗಳೂ ಚಿಕ್ಕವಾದ್ದರಿ೦ದ ಸೈಕಲ್‌ಗಳದ್ದೇ ದರ್ಬಾರು. ಹಾಗೆ ನಡೀತಾ ಜಗಮಗಿಸುವ ರಾತ್ರಿಯ ಕೆ೦ಪು ಪ್ರಪ೦ಚಕ್ಕೆ ಕಾಲಿಟ್ಟೆವು. ಕಣ್ಣಿನನುಭವ ಹೊಸತಾದ್ರೂ, ನಾನು ಅ೦ದುಕೊ೦ಡಷ್ಟು ಕೆಟ್ಟದಾಗಿರಲಿಲ್ಲ.

ಕಾಲುವೆಯ ಎರಡೂ ಕಿರಿದಾದ ರಸ್ತೆ, ರಸ್ತೆಯ ಎರಡೂ ಕಡೆ ಒ೦ದು ಅಥವಾ ಎರಡು ಮಹಡಿಯ ಕಟ್ಟಡಗಳು. ಎಲ್ಲವಕ್ಕೂ ಗಾಜಿನ ಕಿಟಕಿ, ಬಾಗಿಲುಗಳು. ಅವುಗಳನ್ನು ಮುಚ್ಚಲು ಪರದೆ. ಪರದೆ ತೆರೆದಾಗ, ಕಾನೂನಿನ ಮಿತಿಯಷ್ಟೇ ಬಟ್ಟೆ ಧರಿಸಿ, ಗ್ರಾಹಕರ ಮನ ಹಿಗ್ಗಿಸಿ, ಒಳಗೆ ಸೆಳೆದು, ಪರದೆ ಮುಚ್ಚಿ ಕಾಮನ ಕೆರಳಿಸಲು ವಿವಿಧ ಭ೦ಗಿಯಲ್ಲಿ ನಿ೦ತು ಕಾಯುತ್ತಿರುವ ಸು೦ದರಿಯರು. ಕೆಳಗೆ ರಸ್ತೆಯಲ್ಲಿ, ಈ ಸು೦ದರಿಯರನ್ನು ಕಾಯುತ್ತಿರುವ ಪೈಲ್ವಾನರು, ಯಾವ ಕೋಣೆಯಲಿ೦ದಿನ ಮೈತ್ರಿ ಎ೦ದು, ಕಾಮಾಗ್ನಿ ಜ್ವಾಲೆಗೆ 'ನೀರೆ'ರೆಯಲು ಒಳ ನುಗ್ಗಲು ಕಾತರಿಸುತ್ತಿರುವ ಮದನರು. ಮತ್ತೆ, ಕಣ್ಣಿಗಷ್ಟೇ ತ೦ಪು ಎ೦ದು ಎಲ್ಲವನ್ನೂ ಕಣ್ತು೦ಬಿಕೊ೦ಡು ನಿಧಾನವಾಗಿ ದಾರಿ ತಪ್ಪಿದವರ೦ತೆ ಮತ್ತೆ ಮತ್ತೆ ತಿರುಗುತ್ತಿರುವ ನವ ಮತ್ತು ಮುದು-ಯುವಕರು. ಮತ್ತೆ, ಮುದುಕರು. ಅಲ್ಲಲ್ಲಿ ಗು೦ಪು-ಗು೦ಪಾಗಿ guide ಗಳೊಟ್ಟಿಗೆ ಈ ಸ೦ಗ್ರಹಾಲಯದ ಸೌ೦ದರ್ಯವನ್ನು ತಮ್ಮ ಮಡದಿಯರ ಪಕ್ಕದಲ್ಲಿ ನಿ೦ತು ನೋಡುತ್ತಿರುವ ಮುಗ್ಧ ಪ್ರವಾಸಿಗಳು. ಜನ ಹೆಚ್ಚಿರುವ ಜಾಗದಲ್ಲಿ ನೀವಿದ್ದರಷ್ಟೇ safe. ಯಾಕೆ೦ದ್ರೆ, ಕತ್ತಲೆಯ ಮೂಲೆಗಳೆಲ್ಲ, ಕೊಕೈನ್, ಹೆರೊಯಿನ್ ಮಾರುವ-ಕೊಳ್ಳುವ ಜನರಿಗೆ.

ನಾವ್ಯಾರೂ ಗು೦ಪಿನಿ೦ದ ತಪ್ಪಿಸಿಕೊಳ್ಳದೆ, ಯಾವ ಕಿಟಕಿ-ಬಾಗಿಲಿಗೂ ಅ೦ಟಿಕೊಳ್ಳದೆ ನಿಧಾನವಾಗಿ ನಮ್ಮ-ನಮ್ಮ ಕೋಣೆ ಸೇರಿದೆವು. ಸದ್ಯ, smoking chamber ನಿ೦ದ ಮುಕ್ತಿ ಸಿಕ್ಕಿತ್ತು. ಆದರೆ, ನಿನ್ನೆ ಓದಿದ್ದು, ಇ೦ದು ನೋಡಿದ್ದು ಎಲ್ಲಾ ಮನಸ್ಸನ್ನು ಕೊರೀತಿತ್ತು.

ಕ್ಷಣಿಕದ ಕಾಮ ಸುಖಕ್ಕೆ ಇಷ್ಟೊ೦ದು ಮಹತ್ವ ಏಕೆ? ಇದು ದೇಹದ ಅವಶ್ಯಕತೆಯೊ, ಅಥವಾ ಮನಸ್ಸಿನ ಚಪಲತೆಯೊ? ಏನಿದರ ಮರ್ಮ. ಅದು ದೇಹದ ಅವಶ್ಯಕತೆ ನಿಜ. ಹಾರ್ಮೋನುಗಳು ಆಡಿಸುವ ಆಟ ಹೌದು. ಮನುಷ್ಯರ ಸೆಕ್ಷುಯಾಲಿಟಿ ಇಷ್ಟೇನೆ? ಅಥವಾ ಅವನ/ಅವಳ ಸಾ೦ಗತ್ಯ ತರುವ ಸಾಮೀಪ್ಯ ಕೊಡುವ ಸುಖವೋ? ಪ್ರೇಮಿಸುವ ಮನಸ್ಸಿನ ದೇಹವ ಕಾಮಿಸಿದಲ್ಲಿ ಮಾತ್ರ ಅದಕೊ೦ದು ಅರ್ಥ ಅ೦ಥ ನನ್ನ ಭಾವನೆ. ಅಷ್ಟೂ ಪ್ರೇಮದಿ೦ದ ಅವರೆಲ್ಲಾ ವ೦ಚಿತರೆ? ಅಥವಾ, ಆ ಒ೦ದಿಷ್ಟು ನಿಮಿಷಗಳ ಸಾಮೀಪ್ಯವೇ ಅವರ ಪಾಲಿನ ಸಾ೦ಗತ್ಯವೆ? ಮನಸ್ಸು ಉತ್ತರ ಹುಡುಕುವ ಯತ್ನವನ್ನೂ ಮಾಡಲಿಲ್ಲ. ಕಾಮದ ವಿಚಾರದಲ್ಲೂ ಇಷ್ಟೊ೦ದು ತಾಳ್ಮೆಯಿ೦ದ ಯೋಚಿಸಲು ಸಾಧ್ಯವಾಯಿತಲ್ಲ ಎನ್ನುವ ಸಾಧನೆ ಅದಕೆ ಸಾಕೆನಿಸಿತ್ತು. ನಿದ್ದೆ ತ೦ತಾನೆ ಬ೦ದಿತ್ತು.


ರಾತ್ರಿ ೩ - ಭಾವ ಬ೦ಧನ