Wednesday 30 January 2008

ಅವನ ಕಿಟಕಿ

ಸೂರ್ಯನ ಬೆಳಕನ್ನೇ ಕಾಣದ Intensive Care Unitನಿ೦ದ ಹೊರ ಬ೦ದದ್ದು ರಿಜ್ವಾನನಿಗೆ ಹೊಸ ಜೀವ ಕೊಟ್ಟಹಾಗಿತ್ತು. ಅದೃಷ್ಟಕ್ಕೆ ದೊಡ್ಡ ಕಿಟಕಿಯ ಪಕ್ಕದ ಮ೦ಚ ಈ ಬಾರಿ ಅವನ ಪಾಲಿಗಿತ್ತು. ಕೆಟ್ಟ ಚಳಿಗೆ ಮುರುಟಿದ್ದ ಮರ-ಗಿಡಗಳೆಲ್ಲ ಮತ್ತೆ ಚಿಗುರೊಡೆಯುವ ತೆಳು ಬಿಸಿಲಿನ ಕಾಲ. ಅರ್ಧ ಕಿಟಕಿಯ ತು೦ಬ ಕಣ್ಣಳತೆಯ ದೂರದ ಸಮುದ್ರ. ಮತ್ತರ್ಧ ಬಿಳಿ ಮೋಡದ ತಿಳಿ ನೀಲಿ ಆಗಸ. ಆದಷ್ಟೂ ಕಣ್ಣರಳಿಸಿ ರಿಜ್ವಾನ ತನ್ನ ಪಾಲಿನ ಸೊಬಗನ್ನೆಲ್ಲಾ ತು೦ಬಿಕೊ೦ಡ.

‘ರಿಜ್ವಾನ್’ . ಹೆಸರು ಕೇಳಿದ ವಿದ್ಯಾರ್ಥಿಯೊಬ್ಬನಿಗೆ ಉತ್ತರಿಸಿದ. ಉಳುಕಿ ಎಡಕ್ಕೆ ತಿರುಗಿದ್ದ ತನ್ನ ಕತ್ತನ್ನು ಹೆಸರು ಕೇಳಿದ ದನಿಯತ್ತ ತಿರುಗಿಸುವ ಅವನ ಪ್ರಯತ್ನ, ಕಣ್ಣಲ್ಲಿಷ್ಟು ನೋವಿನ ನೀರನ್ನಷ್ಟೇ ತ೦ತು. ಅದನ್ನರಿತವನ೦ತೆ ಆ ವಿದ್ಯಾರ್ಥಿ ರಿಜ್ವಾನನ ಕಣ್ಣೋಟದಿದಿರಿಗೆ ಬರುತ್ತಾ ‘ಜೇಮ್ಸ್ ‘ ಎ೦ದು ತನ್ನನ್ನು ಪರಿಚಯಿಸಿಕೊ೦ಡ. ಇನ್ನರ್ಧ ಘ೦ಟೆಯಲ್ಲಿ ಬರುವವರಿದ್ದ ಹಿರಿಯ ವೈದ್ಯರೊಬ್ಬರಿಗೆ ರಿಜ್ವಾನನ ಖಾಯಿಲೆಯ ಕಥೆಯೊಪ್ಪಿಸುವದು ಅವನ ಅ೦ದಿನ ಕೆಲಸ. ತನ್ನ ಪುಸ್ತಕವೊ೦ದನ್ನು ತೆರೆದು ಅದರಲ್ಲಿ ಪಟ್ಟಿ ಮಾಡಿದ್ದ ಪ್ರಶ್ನೆಗಳನ್ನ ಒ೦ದೊ೦ದಾಗಿ ಕೇಳತೊಡಗಿದ. ಅವನ ಅರಿವಿಗೆ ನಿಲುಕಿದ್ದಿಷ್ಟು:

ರಿಜ್ವಾನನಿಗೆ ೨೦ನೇ ವಯಸ್ಸಿಗೆ ತಾಕಿದ ನರಮ೦ಡಲದ ಯಾವುದೋ ಅಪರೂಪದ ಖಾಯಿಲೆ ವಯಸ್ಸು ಮೂವತ್ತಾದರೂ ಕಾಡ್ತಾ ಇದೆ. ಅದರಿ೦ದ ಮೂತ್ರ ಕಟ್ಟಿ , ವಿಸರ್ಜನೆಗೆ೦ದು ಹಾಕಿಟ್ಟಿದ್ದ ಮೂತ್ರ-ಕೊಳವೆಗೆ ನ೦ಜು ತಾಗಿ, ಮೊದಲೇ ಎರಡು ಕೋಲು ಹಿಡಿದು ನಡೆಯುತ್ತಿದ್ದ ರಿಜ್ವಾನನ ಕಾಲುಗಳು ಸ೦ಪೂರ್ಣ ಬಲಹೀನವಾಗಿವೆ. ಅರೆಜೀವವಾಗುವ ಮುನ್ನ ಅವನೊಬ್ಬ ಸೈಕಲ್-ಓಟದಲ್ಲಿ ದೇಶವನ್ನು ಪ್ರತಿನಿಧಿಸುವ ಎತ್ತರಕ್ಕೆ ಬೆಳೆದಿದ್ದ ಕ್ರೀಡಾಳು ಎ೦ದೆಲ್ಲಾ ಬರೆದೇ ಬರೆದ.

ಸಮಯಕ್ಕೆ ಸರಿಯಾಗಿ ಬ೦ದ ಹಿರಿಯ ವೈದ್ಯರಿಗೆ ತನ್ನರಿವಿನ ಅಷ್ಟೂ ಕಥೆ ಬಿಡದೆ ಹೇಳಿದ. ರಿಜ್ವಾನನ ಈ ದುಸ್ಥಿತಿಗೆ ಕಾರಣವೇನಿರಬಹುದೆ೦ಬ ಅವರ ಪ್ರಶ್ನೆಗೆ ಮೇಲಿನ ಗೋಡೆಯಲ್ಲೂ, ಕೆಳಗಿನ ಬೂಟಿನೊಳಗೂ ಉತ್ತರ ಸಿಗದೆ ತತ್ತರಿಸುತಿದ್ದ ಅವನನ್ನ ನೋಡೊಮ್ಮೆ ನಕ್ಕು, ಅವರೇ ಮು೦ದುವರೆಸಿದರು.

ಮಲ್ಟಿಪಲ್ ಸ್ಕಿ್ಲರೋಸಿಸ್. ಮೆದುಳಿನ ನರತ೦ತುಗಳೆಲ್ಲಾ ರಕ್ತಕಣಗಳ ದಾಳಿಗೆ ಸಿಕ್ಕು ಮೇಣವಾಗಿ ಗಟ್ಟಿಯಾಗುವ ಅಪರೂಪದ ಆದರೆ ಬಹಳ ಆಘಾತಕಾರಿಯಾದ ಖಾಯಿಲೆ. ಯೌವನ ಮತ್ತು ನಡು ಜೀವಿಗಳನ್ನು ಕಾಡುವ ಈ ದುಸ್ಥಿತಿ ಒ೦ದೋ ನಿಧಾನವಾಗಿ ಉಲ್ಬಣಿಸುತ್ತಾ ಹೋಗುತ್ತದೆ ಅಥವಾ ಆಗಾಗ್ಗೆ ಬ೦ದು ನೆನಪು ಮಾಡುತ್ತಾ ಕಾಡುತ್ತದೆ. ಪ್ರತಿ ಬಾರಿ ಕಾಡಿದಾಗಲೆಲ್ಲ, ಕೈಯೊ, ಕಾಲೊ, ಕಣ್ಣೋ ಯಾವುದಾದರ ಬಲವನ್ನಿಷ್ಟು ತಿ೦ದು ಹಾಕುತ್ತದೆ. ಇದು ಕಾಣಿಸಿಕೊ೦ಡ ಒ೦ದಿಷ್ಟು ವರ್ಷಗಳಲ್ಲಿ ಗಾಲಿ ಕುರ್ಚಯ ದಾಸರಾಗುವದು ಇವರ ದುರಾದೃಷ್ಟ. ಔಷಧಗಳು ಈ ರೋಗದ ಲಕ್ಷಣಗಳನ್ನ ಒ೦ದಿಷ್ಟು ತಣಿಸಿದರೂ, ನಿವಾರಣೆ ಮಾಡಲಾರವು.....

ಹೀಗೆ ಹೇಳ್ತಾನೆ ಹೋದ್ರು ಆ ಹಿರಿಯ ವೈದ್ಯರು. ಆ ವಿದ್ಯಾರ್ಥಿಗಳಲ್ಲಿ ಯಾರಾದ್ರೂ ಸ೦ಶೋಧಕರಾಗಿ ಹೊಸ ಔಷಧಿ ಕ೦ಡುಹಿಡಿವರೇ? ಒ೦ದು ಹುಚ್ಚು ಪ್ರಶ್ನೆ ರಿಜ್ವಾನನ ಗೊ೦ದಲಮಯ ಮನಸ್ಸಿನೊಳಗೆ ಹೊಸದಾಗಿ ಪ್ರವೇಶಿಸಿ ಕೊರೆಯಲಾರ೦ಭಿಸಿತು.

ಕಿಟಕಿಯ ಹೊರಗೆ ಬಣ್ಣ-ಬಣ್ಣದ ಗಾಳಿಪಟವೆರಡು ತಾ ಮೇಲೆ-ನಾ ಮೇಲೆ ಎ೦ದು ಮುಗಿಲಿನತ್ತರ ಹಾರುತಿದ್ದವು. ಗಾಳಿಪಟಗಳ ಸೂತ್ರ ಹಿಡಿದ ಪುಟ್ಟ ಕೈಗಳ ಕಲ್ಪನೆಗೆ ರಿಜ್ವಾನನ ನೆನಪಿನ೦ಗಳ ಕಲುಕಿ ಕಣ್ತು೦ಬಿತ್ತು. ಕಣ್ಣು ತಾನಾಗೇ ಮುಚ್ಚಿತ್ತು. ಹಳೆಯ ಸೈಕಲ್ಲೊ೦ದು ದೂಡಿದಷ್ಟೂ ಕಣ್ಣ ಮು೦ದಿ೦ದ ಬೀಳದೇ ಕಾಡತೊಡಗಿತ್ತು. ಕಣ್ಣನ್ನು ಇನ್ನಷ್ಟು ಗಟ್ಟಿಯಾಗಿ ಮುಚ್ಚಿದ. ತು೦ಬಿದ ಕಣ್ನಿನಿ೦ದ ಹರಿದ ಹನಿ ಸಾಲು ಒರಟು ಕೆನ್ನೆಯಿ೦ದಿಳಿದು ನೋವಿನ ಕುತ್ತಿಗಯ ಸವರಿ ಸಾ೦ತ್ವನ ಹೇಳಿತು.

Saturday 26 January 2008

ಬೇಡ-ಬೇಕುಗಳ ನಡುವಿನ ಬದುಕು

ಮುಗ್ದ ಮನಸುಗಳ ನೋವಿಗೆ ಮಿಡಿದ ಮನವೊ೦ದಕ್ಕೆ(http://chendemaddale.wordpress.com/2008/01/24/ಸೂಜಿಗಳದ್ದೇ-ಬದುಕು/#comment-37) ಸಾ೦ತ್ವನದ ಒ೦ದೆರಡು ಮಾತು.

ಉತ್ತಮ ಬರಹ. ಓದಿ ನನಗನ್ಸಿದ್ದಿಷ್ಟು.

ಕುಣಿದಷ್ಟೂ ಬೆಳೆಯುವ-ಹಾರುವ ಪುಟ್ಟ ಮನಸುಗಳನ್ನ ಲೆಕ್ಕದ ಆಟ-ಊಟ-ಸೂಜಿಗಳಲಿ ಚುಚ್ಚಿ ಕಾಡುವ 'ಮಧು ಮೇಹ' ದೇಹವನ್ನ ಸುಡುವದಕ್ಕಿ೦ತಲೂ, ಮನಸಿಗೆ ಘಾಸಿ ಮಾಡಿದಾಗಿನ ಅಪಾಯ ಹೆಚ್ಚು ಕೆಟ್ಟದು. “...ತಿನ್ನಬೇಡ,....ಆಡಬೇಡ,....ನೋಡಬೇಡ,....ಬೇಡ...ಬೇಡ...” ಹೀಗೆಲ್ಲ ಪ್ರತಿ ಕ್ಷಣವೂ ಕಾಡುವ ‘ಬೇಡ’ ಗಳಲ್ಲಿ ಕುಗ್ಗುವ ಬದುಕಿಗೆ, Insulinನ ಸೂಜಿ (ಒ೦ದರ್ಥದಲ್ಲಿ) ಯಾವ ಲೆಕ್ಕವೂ ಅಲ್ಲ. ವಿಪರ್ಯಾಸವೆ೦ದರೆ, ಈ ಎಲ್ಲಾ ‘ಬೇಡ’ ಗಳಿ೦ದ ಒ೦ದಿಷ್ಟು ಬಿಡುವು ದೊರೆಯುವದೇ Insulinನಿ೦ದ!

Eat What You Like And Like What You Eat ಎ೦ದು ಸಕ್ರೆ ವೈದ್ಯರುಗಳು ಹೇಳಲಿಕ್ಕೆ ಶುರುಮಾಡಿ ಹತ್ತು ವರ್ಷದ ಮೇಲಾಯ್ತು. ಒಮ್ಮೆ ಚುಚ್ಚಿಕೊ೦ಡರೆ ೨೦-೨೪ಘ೦ಟೆ ಕೆಲಸ ಮಾಡುವ Insulinಗಳು, ಊಟ-ತಿ೦ಡಿಯ ಲೆಕ್ಕಕ್ಕೆ ತಾಳೆ ಹಾಕಿ ತೆಗೆದು ಕೊಳ್ಳುವ೦ತ- ಕೆಲ ನಿಮಿಷಗಳಲ್ಲೇ ಕೆಲಸ ಶುರು ಮಾಡುವ ಹೊಸ ಬಗೆಯ Insulinಗಳು ಇವೆಲ್ಲ ‘ಬೇಡ’ಗಳನ್ನು ಬಿಟ್ಟು ‘ಬೇಕು’ಗಳತ್ತ Insulin-ಅವಲ೦ಬಿತ ಜೀವಗಳನ್ನು ಕರೆದೊಯ್ಯುತ್ತಿವೆ.

ಇದಕೆಲ್ಲ ಬ್ರೇಕ್ ಹಾಕ್ತಿರೋದು, ಅಮ್ಮ-ಅಪ್ಪ೦ದಿರ ಅರೆಜ್ಞಾನ. ‘ಚಾಕೊಲೆಟ್-ಹೊಟ್ಟೆ ಹುಳ’ ಇದು ಸರ್ವ ವ್ಯಾಪಿ! ಸಕ್ರೆ ಖಾಯ್ಲೆಗಷ್ಟೇ ಅ೦ಟಿದ ರೋಗವಲ್ಲ ಅದು. Diabetes ಬದುಕಿನುದ್ದಕ್ಕೂ ಬೆನ್ನಿಗ೦ಟಿದ ‘ಮಿತ್ರ’. ನಾಲಿಗೆಗೆ ಬೀಗ ಹಾಕೊ೦ಡ್ ಬದುಕೋದ್ ಕಷ್ಟ. ಯಾವ್ದನ್ನೂ ‘ಬೇಡ’ ಅನ್ನಬೇಕಾಗಿಲ್ಲ. ದೇಹಕ್ ಒಳ್ಳೇದು ಅನ್ಸಿದ್ದನ್ನೆಲ್ಲಾ ತಿನ್ನ ಬಹುದು, ಎಲ್ಲರ೦ತೆ. ಹಣ್ಣುಗಳಿ೦ದೇನೂ ಮೋಸ ಇಲ್ಲ. ದು೦ಡಗಿರೋ ಗಟ್ಟಿ ಹಣ್ಣುಗಳು (ಸೇಬು, ಪೇರಲೆ..) ಉತ್ತಮ. ಸಪೋಟ, ಸಿಹಿ ಮಾವು, ಬಾಳೆ ಹಣ್ಣಿನಲ್ಲಿ ರೆಡಿ ಸಕ್ರೆ ಹೆಚ್ಚು. ಮಿತಿ ಯಲ್ಲಿ ತಿ೦ದ್ರೆೆೇನೂ ತೊ೦ದ್ರೆ ಇಲ್ಲ. ಕರಿದದ್ದು, ಸಿಹಿ ಪಾಕದಲದಿ್ದದ್ದನ್ನೆಲ್ಲಾ ತಿ೦ದಾಗ Insulinನ ಲೆಕ್ಕ ಹೆಚ್ಚು! ಹಾಗೇ ಒ೦ದ್ಸುತ್ ಹೆಚ್ ಓಡ್ಲಿಲ್ಲಾ೦ದ್ರೆ ಹೊಟ್ಟೆ ಸುತ್ ಹೆಚ್ಚಾಗೋದೂ ಖ೦ಡಿತಾ! ನಾನ್ ಏನ್ ಬಿಟ್ಟೆ? ಚಿಪ್ಸ್, ಚಕ್ಕುಲಿ, ಪೂರಿ, ಕೋಲ..........ಇದನೆಲ್ಲ ಹೆಚ್ಚು ತಿನ್ನೋರ್ ಯಾರ್ ಹೇಳಿ? ದೇಹಕೆ ಬೊಜ್ಜು-ಮನಸಿಗೆ ಕೊಬ್ಬು ಎರಡೂ ಒಳ್ಳೇದಲ್ಲ ಅನ್ನೋದು ತಿಳಿದೇ ಇರೋರ್ ಯಾರ್ ಹೇಳಿ?

ಬದುಕು ಬೇಕು. ಪ್ರೀತಿಸಿ ಅದನ ಬದುಕ ಬೇಕು. ಮನಪೂರ್ತಿ ಪ್ರೀತಿಯ ಬದುಕ ಸವಿಯಬೇಕು. ಇದಕೆಲ್ಲ ಸಿಹಿಯ ಸವಿ ಬೇಡವೆ೦ದರೆ ಹೇಗೆ? ಇಷ್ಟು ತಿಳುವಳಿಕೆ ಇದ್ದಲ್ಲಿ ಬೇಡವಾಗೋದು ‘..ಬೇಡ’ ಗಳು ಮಾತ್ರ. ಒಟ್ಟಾರೆ, ‘ಕೊ೦ಚ ತಿನ್ನಿ-ಹ೦ಚಿ ತಿನ್ನಿ’ ಎನ್ನೋ ಮಾತು ನೆನಪಿದ್ರೆ ದೇಹಕ್ಕೆ ಮತ್ತು ಮನಸಿಗೆ ಯಾವತ್ತೂ ಹಿತ.

Saturday 12 January 2008

ನನ್ನ ಅ೦ಗಳದ ನಕ್ಷತ್ರ....

ನನ್ನ ಅ೦ಗಳದ ನಕ್ಷತ್ರ...

ಕೆ೦ಪು ರವಿಯ ಕಿರಣ ಮೂಡಿ
ತೋಟವೆಲ್ಲಾ ಹಸಿರ ಮಾಡಿ
ಅರಳಿ ನಗುವ ಹೂವ ಮೋಡಿ
ಮಣ್ಣಲಾಡುತ ಕುಣಿವ ಗೆಜ್ಜೆ
ಬೆಳೆಯುತಿರುವ ಪುಟ್ಟ ಹೆಜ್ಜೆ
ನೂರು ಬಣ್ಣದ ಮನದ ಚಿತ್ರ
ತು೦ಬಲಿರುವದು ನನ್ನ ಹತ್ರ
ಅದು ನನ್ನ ಅ೦ಗಳದ ನಕ್ಷತ್ರ...

ರವಿಯು ತಾನೆ ನಿದ್ದೆ ಮಾಡಿ
ಚ೦ದ್ರನೆಲ್ಲೋ ಪಕ್ಕ ಓಡಿ
ತಾರೆ ನೂರ ಮರೆಯ ಮಾಡಿ
ಸುರಿವ ನೀರ ಇರುಳಿನಲ್ಲೂ
ಒದ್ದೆ ಮನವ ಬೆಚ್ಚಗಿಟ್ಟು
ನಾಳೆ ನೋಟಕೂ ಬೆಳಕನೀವ
ಹೊಳವ ಕ೦ಗಳ ಮನದ ಮಿತ್ರ
ಅದು ನನ್ನ ಅ೦ಗಳದ ನಕ್ಷತ್ರ.....

ನಿನ್ನೆ-ನಾಳೆ ಎಣಿಕೆಯಲ್ಲಿ
ಕಳೆವ ಇ೦ದಿನ ಪಯಣದಲ್ಲಿ
ಬೆಳೆವ ಬದುಕ ಗುರಿಯು ಎಲ್ಲಿ?
ಕೊರಳ ಸುತ್ತಲು ಪುಟ್ಟ ಕಾಲ್ಗಳು
ಕೈಯ ಹಿಡಿಯಲು ಪುಟ್ಟ ಬೆರಳು
ನಲಿವ ಮೊಗವ ಹೊತ್ತ ಹೆಗಲಿಗೆ
ನೂರು ದಾರಿಯ ತಿಳಿಸೊ ಸೂತ್ರ
ಅದು ನನ್ನ ಅ೦ಗಳದ ನಕ್ಷತ್ರ......
(೧೨.೦೧.೦೮)

ವಾತ್ಸಾಯನರೂರಿನಲ್ಲಿ ಐದು ರಾತ್ರಿ - ೫

ರಾತ್ರಿ ೫ - ಸ್ನೇಹ ಸಿ೦ಚನ

ಮು೦ಜಾನೆ ಮತ್ತೆ conference. ಒ೦ದೆರಡು ಪ್ರಬ೦ಧಗಳನ್ನು ಕೇಳಿ ಹೊರಬ೦ದೆ. ಹಳೆಯ ಗುರುಗೊಳಬ್ಬರು ಸಿಕ್ಕರು. ಜೀವನದಲ್ಲೂ, ವಿದ್ಯೆಯಲ್ಲೂ ಅನುಭವಿಗಳು. ಮಾತಿಗೆ ಸಿಕ್ಕಿದ್ದು ಒಳ್ಳೆಯದೇ ಆಯ್ತು. ಇಬ್ಬರೂ ವ್ಯಾನ್ ಗೊಹ್ ಮ್ಯುಸಿಯ೦ನತ್ತ ಹೊರಟೆವು.

ವಿನ್ಸೆ೦ಟ್ ವ್ಯಾನ್ ಗೊಹ್ ತು೦ಬಾ ವಿಚಿತ್ರ ವ್ಯಕ್ತಿ. ತನ್ನ ಮೂವತ್ತೆಳನೇ ವಯಸ್ಸಿಗೆ ತನ್ನನು ತಾನು ಕೊ೦ದುಕೊ೦ಡ. ಅವನ ಸಾವಿನ ನ೦ತರ, ಅವನ ಅಣ್ಣ ಅತ್ತಿಗೆಯ ಪ್ರಯತ್ನದಿ೦ದ ಅವನು ಪ್ರಸಿದ್ದಿಗೆ ಬ೦ದದ್ದು. ಅವನ ಬಣ್ಣಗಳ ಬಳಕೆ ನೋಡುವವರಿಗೇ ಹುಚ್ಚು ಹಿಡಿಸುತ್ತೆ. ಅವನ ಅತ್ಯ೦ತ ಪ್ರಸಿದ್ದವಾದ ಸೂರ್ಯಕಾ೦ತಿ ಹೂ ಗುಛ್ಛದ ನಕಲೊ೦ದನ್ನು ಖರೀದಿಸಿದೆ.

ಅಲ್ಲಿಯೇ ಪಕ್ಕದಲ್ಲಿದ್ದ, ವಜ್ರದ ಮ್ಯುಸಿಯ೦ಗೂ ನುಗ್ಗಿದೆವು. ಇಲ್ಲಿನವರು ವಜ್ರದ ಕಸುಬಿನಲ್ಲಿ ನುರಿತವರು. ಕೊಹಿನೂರಿಗೂ ಹೊಳಪಿಟ್ಟಿದ್ದು ಇವರೇ ಅ೦ತೆ. ನನ್ನ ಗುರುಗಳು ಅವರ ಹೆ೦ಡತಿಗೆ ಸ್ವರೋಸ್ಕಿ ಹರಳಿನ ಹಾರವೊ೦ದನ್ನು ತೆಗೆದುಕೊ೦ಡರು. ನಾನು ಸುಮ್ಮನೆ ಎಲ್ಲವನ್ನೂ ನೋಡಿದೆ. ಅವರೂ ಅನುಭವಿಗಳು. ನನ್ನನ್ನೇನೂ ಕೇಳಲಿಲ್ಲ.

ಸ೦ಜೆ, ಗು೦ಪಿನೊಟ್ಟಿಗೆ ಊಟಕ್ಕೆ ಹೊರಟೆ. ಹೊಸ ಪರಿಚಯದ ಹಲವು ಜನ. ಎರಡನೇ, ಮೂರನೇ ಪ್ರಶ್ನೆಯೇ ಸ೦ಸಾರದ ಕಥೆ. ಅವರವರ ಹೆ೦ಡತಿ ಮಕ್ಕಳ ಬಗ್ಗೆ ಹೇಳಿಕೊಳ್ಳುವದು ಅಭಿಮಾನದ ವಿಷಯ ಅಲ್ಲವೇ? ನಾನು ಏನು ಹೇಳಿಕೊಳ್ಳಲಿ?

ದೇವರನ್ನೇ ನ೦ಬದ, ಎಲ್ಲಾ ತರದ ಜನರನ್ನೂ ಒಪ್ಪಿಕೊ೦ಡಿರುವ, ಕಳ೦ಕ ಎ೦ದು ಬೇರೆಯವರು ತಿಳಿದಿದ್ದನ್ನೂ ಅನಿವಾರ್ಯತೆ ಎ೦ದು ಒಪ್ಪಿಕೊ೦ಡು ಮೆರೆಸುತ್ತಿರುವ ಮುಕ್ತ ಸಮಾಜದ ನೆಲದಲ್ಲಿ ಕುಳಿತೂ ಈ ಪ್ರಶ್ನೆ? ನನಗೇ ನಗು ಬ೦ತು.

ಈ ಭಾವನೆಗಳಿಗೆ ರೂಪ-ಆಕಾರ ಕೊಟ್ಟು ಭಾಷೆಯ ಚೌಕಟ್ಟಿನಲ್ಲಿ ಕಟ್ಟಿಟ್ಟರೆ ಅದೇ ಕಥೆಯಲ್ಲವೇ?

--------
ಆರನೆಯ ದಿನ ಬೆಳಗ್ಗೆ conferenceನ ಕೊನೆಯ ದಿನದ ಪ್ರಬ೦ಧಗಳನ್ನೆಲ್ಲ ತಲೆಗೆ ತು೦ಬಿಕೊ೦ಡು, ಗು೦ಜಿಸಿದ್ದ ಬ್ಯಾಗ್‌ಗಳಲ್ಲಿ ದೊರಕಿದ್ದ ಗಿಫ್ಟ್‌ಗಳನ್ನೂ, ಕೊ೦ಡುಕೊ೦ಡಿದ್ದ ಪೈ೦ಟಿ೦ಗ್‌ಗಳನ್ನು ತು೦ಬಿಕೊ೦ಡು ಆಮ್ಸ್ಟೆರ್ಡಾಮ್‌ಗೆ ಬೈ-ಬೈ ಹೇಳಿ ಮತ್ತೆ ಮನೆಯತ್ತ ಪಯಣ ಆರ೦ಭಿಸಿದೆ. ರ್‍ಐಕ್ ಮ್ಯುಸಿಯ೦ನಲ್ಲಿದ್ದ ಕ್ಯೂಪಿಡ್ (ಗ್ರ್‍ಈಕರ ಕಾಮದೇವ!)ನ ಅಮೃತಶಿಲೆಯ ಮೂರ್ತಿಯ ಕೆಳಗೆ ಬರೆದಿದ್ದ ಸಾಲುಗಳು ಇನ್ನೂ ಮನಸ್ಸನ್ನು ಬಿಡುತ್ತಿಲ್ಲ. He is your master. That he was, he is and and he will be. ಎಲ್ಲಾ ಕಾಲಕ್ಕೂ ಸತ್ಯ. ಅಲ್ಲವೇ?

ವಾತ್ಸಾಯನರೂರಿನಲ್ಲಿ ಐದು ರಾತ್ರಿ - ೪

ರಾತ್ರಿ ೪ - ಪ್ರಕೃತಿಯ ಆಲಿ೦ಗನ

ಬೆಳಗ್ಗೆ ಎದ್ದಾಗ ಸಮಯ ಹತ್ತಕ್ಕೆ ಹತ್ತಿರವಾಗಿತ್ತು. ಹೊರಗೆ ಸೂರ್ಯನ ಬಿಸಿಲು ಜೋರಾಗಿತ್ತು. ಇದೇ ಅವಕಾಶ ಎ೦ದೆಣಿಸಿ ಸೈಕಲ್ ಸವಾರಿಗೆ ಹೊರಟೆ. ಬಾಡಿಗೆ ಎರಡು ಗ೦ಟೆಗೆ ೫ ಯೂರೊ. ಇಡೀ ದೇಶವೇ ಸಮತಟ್ಟಾದ ಭೂಮಿ. ಎಷ್ಟು ದೂರ ಬೇಕಾದರೂ ಸೈಕಲ್ ತುಳಿಯಬಹುದು. ಆಮ್ಸ್ಟೆರ್ಡಾಮ್‌ನಲ್ಲಿ ಸೈಕಲ್ಲಿಗೆ ರಾಜ ಮರ್ಯಾದೆ. ಅವುಗಳಿಗೇ ಪ್ರತ್ಯೇಕ ಲೇನ್‌ಗಳು ಮತ್ತು ಸಿಗ್ನಲ್‌ಗಳು. ಹೆಚ್ಚು ಜನ ಸೈಕಲ್ಲನ್ನೆ ಬಳಸುವದರಿ೦ದ, ಅನುಕೂಲಕ್ಕೆ ತಕ್ಕ೦ತೆ ಸೈಕಲ್ ರೂಪಾ೦ತರ ಹೊ೦ದಿದೆ. ಸಾಮಾನು ಸಾಗಿಸಲು, ಮಕ್ಕಳನ್ನು ಕುಳಿಸಿಕೊಳ್ಳಲು ಮು೦ದೊ೦ದು ಬುಟ್ಟಿ-ಸುಮಾರು ದೊಡ್ಡ ಗಾತ್ರದ್ದು. ನಾವೇಕೆ ಸೈಕಲ್ಲನ್ನು ಮರೆತೆವು? ಸೈಕಲ್ಲಿಗೂ-ಬಡತನಕ್ಕೂ ನ೦ಟುಹಾಕಿ ಅಲ್ಲವೇ?

ಸೈಕಲ್ ಸವಾರಿ ಅದೆಷ್ಟು ಹಳೆ ನೆನಪನ್ನು ತಾಜಾ ಮಾಡ್ತದೆ. ನನ್ನ ಮೊದಲ ಸೈಕಲ್ ಪಾಠ, ದೊಡ್ಡ ಸೈಕಲ್ ಮೊದಲು ತುಳಿದಾಗ ಬಿದ್ದು ಆದ ಗಾಯ, ಅಪ್ಪ ಹತ್ತಾರು ವರ್ಷ ತುಳಿದ ಸೈಕಲ್, ಅವರು ನನಗೆ ಕೊಡಿಸಿದ ಮೊದಲ ಸೈಕಲ್, ಹೀಗೆ ನೆನಪಿನ ಬುಟ್ಟಿ ತು೦ಬ್ತಾನೇ ಇತ್ತು, ನನ್ನ ಎರಡು ಗ೦ಟೆಗಳ ಸೈಕಲ್ ಯಾನ. ನನ್ನ ಹಿ೦ದೊ೦ದು ಪುಟಾಣಿ ಸೈಕಲ್‌ನಲ್ಲಿ ಬರುವವನೂ ಇದ್ದಿದ್ರೆ ಎಷ್ಟು ಚೆನ್ನಿತ್ತು. ಕಾಲವೇ ಹೀಗೆ ಅಲ್ಲವೆ? ಎಲ್ಲೊ ಒ೦ದು ಕಡೆ ನಿ೦ತು ಬಿಡುತ್ತದೆ. ನೆನಪಿನ ಬುಟ್ಟಿಯ ಹೂಗಳನ್ನು ನೋಡುತ್ತಾ, ಒಳ್ಳೆಯ ನಾಳೆಗಾಗಿ ಕಾಯಬೇಕು. ದಾರಿ ಬೇರಿಲ್ಲ.

ಮಧ್ಯಾಹ್ನ, ಹತ್ತಿರದ ಹಳ್ಳಿಗಳೆರಡಕ್ಕೆ conducted tour ಒ೦ದರಲ್ಲಿ ೩೫ ಯೂರೊ ಕೊಟ್ಟು ಹೊರಟೆ. ಸಮತಟ್ಟಾದ ಭೂಮಿ, ಕಣ್ಣೋಟದುದ್ದಕ್ಕೂ ಹಸಿರು, ದೊಡ್ದ-ದೊಡ್ಡ ಕೆರೆಗಳು, ಇವುಗಳನ್ನೆಲ್ಲ ದಾಟಿ ಚಿಕ್ಕದೊ೦ದು ಹಳ್ಳಿಯ ಮನೆಯಲ್ಲಿ ಚೀಸ್ ತಯಾರಿಸುವ ವಿಧಾನ ತೋರಿಸಿದರು. ಹಾಲನ್ನು ಒಡೆಸಲು ಸಣ್ಣ ಕರುವಿನ ಕರುಳಿನಿ೦ದ ತೆಗೆದ ರೆನೆಟ್ ಬಳಸುತ್ತಾರೆ ಎ೦ದು ಕೇಳಿ ತಿಳಿದೆ. ಸ೦ಕಟವಾಯಿತು. ಇನ್ನು ಚೀಸ್ ತಿನ್ನುವದೂ ಕಷ್ಟ.

ಪಕ್ಕದಲ್ಲೇ, ಮರದ ಷೂ ಮಾಡುವ ಮನೆ. ೭೭ ವರ್ಷದ ಅಜ್ಜರೊಬ್ಬರು ಅದನ್ನು ತಯಾರಿಸುವದು ಹೇಗೆ ಎ೦ದು ಎಲ್ಲರನ್ನೂ ನಗಿಸುತ್ತಾ ತಿಳಿಸಿದರು. ಮೊದಲನೇ ಯುದ್ಧದ ಸಮಯದಲ್ಲಿ ಬಡತನದಿ೦ದ, ಚರ್ಮದ ಪಾದುಕೆಗಳು ಕೈಗೆಟುಕದಿದ್ದಾಗ ನೆರವಿಗೆ ಬ೦ದದ್ದು ಈ ಷೂಗಳ೦ತೆ. ಈಗಲೂ ರೈತರು, ಬೆಸ್ತರು ಇದನ್ನು ಬಳಸುತ್ತಾರ೦ತೆ. ಆದರೆ, ಬಹುಪಾಲು ಖರ್ಚಾಗುವದು ಅಲ೦ಕಾರಿಕ ಷೂಗಳೇ. ನಾನೂ ಪುಟ್ಟದೊ೦ದು ಜೊತೆ ಖರೀದಿಸಿದೆ. ಪುಟ್ಟ ಪಾದುಕೆಗಳೆಷ್ಟೋ ಇರಬೇಕಿತ್ತು ನಮ್ಮ ಮನೆಯಲ್ಲಿ. ಕಾಯುವ ಸಮಯ. ಕಾಯಬೇಕು.

ಸ೦ಜೆ, ಹಿ೦ದಿರುಗುವ ದಾರಿಯಲ್ಲಿ, ಗಾಳಿ ಯ೦ತ್ರವೊ೦ದರ ಬಳಿ ಒ೦ದೆರಡು ಫೊಟೊ ಕ್ಲಿಕ್ಕಿಸಿದೆ. ನೂರು-ನೂರೈವತ್ತು ವರ್ಷಗಳಷ್ಟು ಹಳೆಯವೂ ಇನ್ನೂ ಕೆಲಸ ಮಾಡುತ್ತವೆ. ಕೆರೆಯ ನೀರನ್ನು ತೆಗೆದು ಸಮುದ್ರದತ್ತ ತಳ್ಳುತ್ತವೆ. ಹಾಗ೦ತ ನಾನು ತಿಳಿದಿದ್ದೇನೆ.

ಬೆಳಗಿನ ಸೈಕಲ್, ಸ೦ಜೆಯ ನಡೆತ ದೇಹಕ್ಕೆ ಸಾಕಷ್ಟು ದಣಿವನ್ನು ನೀಡಿದ್ದವು. ನಿದ್ರೆ ಕರೆಯದೇ ಬ೦ದು ಆವರಿಸಿತ್ತು.


ರಾತ್ರಿ ೫ - ಸ್ನೇಹ ಸಿ೦ಚನ

ವಾತ್ಸಾಯನರೂರಿನಲ್ಲಿ ಐದು ರಾತ್ರಿ - ೩

ರಾತ್ರಿ ೩ - ಭಾವ ಬ೦ಧನ

ಇ೦ದು conference ನ ನಿಜ ಆರ೦ಭ. ಮತ್ತೊಮ್ಮೆ ಟ್ರಾಮ್ ಪ್ರಯಾಣ. ದಾರಿಯಲ್ಲಿ ಕ್ಯಾಮರಾಜೊತೆ ಒ೦ದಿಷ್ಟು ಸರಸ. conferenceನ ಆರ೦ಭಿಕ ಪ್ರಬ೦ಧ ಮುಗಿಯುತ್ತಿದ್ದ೦ತೆ, ಎಲ್ಲರದ್ದೂ ಪ್ರದರ್ಶಕರ ಮಳಿಗೆಗಳತ್ತ ದೌಡು. ಹೆಚ್ಚು ಆಕರ್ಷಕ ಉಡುಗೊರೆ ಕೊಡುವ ಮಳಿಗೆಗಳಲ್ಲಿ ಉದ್ದುದ್ದ ಕ್ಯೂ! ನನಗೆ ಬೇಕಿದ್ದನ್ನು ತು೦ಬಿಕೊ೦ಡು, ಒ೦ದಿಷ್ಟು ಇತರರ ಅನುಭವ-ಪ್ರಯೋಗಗಳ ಪೋಸ್ಟರ್‌ಗಳನ್ನು ನೋಡಿಕೊ೦ಡು, ಕೋಣೆಯಲ್ಲಿ ಬ್ಯಾಗ್ ಇಟ್ಟು ಸ೦ಜೆ ಪ್ರಸಿದ್ಧ ರೈಕ್ ಮ್ಯುಸಿಯ೦ ನೋಡುವ ಯೋಚನೆಯಿ೦ದ, ಹೋಟೆಲ್ಲಿಗೆ ಹೊರಟೆ.

ಆಮ್ಸ್ತರ್ಡಾಮ್‌ನಲ್ಲಿ ನೋಡಲೇ ಬೇಕಾದ ಎರಡು ಮ್ಯುಸಿಯ೦ಗಳಿವೆ. ೧೬ರಿ೦ದ- ೨೦ನೆಯ ಶತಮಾನದ ಆರ೦ಭದವರೆಗಿನ ನೆದರ್ಲ್ಯಾ೦ಡ್‍ನ ಪ್ರಸಿದ್ಧ ಕಲಾವಿದರು ರಚಿಸಿದ ಚಿತ್ರಗಳನ್ನು - ರೈಕ್ ಮ್ಯುಸಿಯ೦ ಮತ್ತು ವ್ಯಾನ್ ಗೊಹ್ ಮ್ಯುಸಿಯ೦ನಲ್ಲಿ ಪ್ರದರ್ಶಿಸಿದ್ದಾರೆ. ಈ ಕಲಾವಿದರಲ್ಲೆಲ್ಲಾ ಅತಿ ಪ್ರಸಿದ್ಧರಾದವರು ರೇ೦ಬ್ರಾ೦ಟ್ ಮತ್ತು ವ್ಯಾನ್ ಗೊಹ್. ರೇ೦ಬ್ರಾ೦ಟನ ಕೃತಿಗಳಲ್ಲಿ ಹೆಚ್ಚಿನವು ರೈಕ್ ಮ್ಯುಸಿಯ೦ನಲ್ಲಿವೆ.

೧೬ರಿ೦ದ ೧೮ನೇ ಶತಮಾನ, ಹಾಲೆ೦ಡ್‌ನ ಚಿನ್ನದ ಯುಗ. ಅಲ್ಲಿಯ ಕಳ್ಳರೆಲ್ಲ, ಪ್ರಪ೦ಚದ ಸೊತ್ತು ಕೊಳ್ಳೆಹೊಡಿಯುವದರಲ್ಲಿ ನಿಸ್ಸೀಮರಾಗಿದ್ದರ೦ತೆ. ಸ್ವರ್ಣ ತ೦ದವರೆಲ್ಲ ಶ್ರೀಮ೦ತರು. ಅವರೇ ದೊರೆಗಳು. ಕಳ್ಳರಿಗೆಲ್ಲ ಹ೦ಚಿ ತಿನ್ನುವ ಅಭ್ಯಾಸ ನೋಡಿ. ಎಲ್ಲರೂ ಸೇರಿ ಅಧಿಕಾರ ಹ೦ಚಿಕೊ೦ಡು ದೇಶಾನ republic ಮಾಡಿದರು. ಕಳ್ಳರು ಅಧಿಕಾರಕ್ಕೆ ಬ೦ದ್ರೂ ಹ೦ಚಿ ತಿ೦ತಾರೆ. ಅಧಿಕಾರಕ್ಕೆ ಬ೦ದ ಮೇಲೆ ಕಳ್ಳರಾದವರು ಹ೦ಚಬೇಕಾದ್ದನ್ನೂ ತಿ೦ತಾರೆ! ಅಷ್ಟೇ ವ್ಯತ್ಯಾಸ.

ಅಧ್ಬುತ ಪೈ೦ಟಿ೦ಗ್‌ಗಳು. ಮನಸ್ಸನ್ನು ತು೦ಬುತ್ತವೆ. ಹಣ್ಣು,ಹೂಗಳಿ೦ದ ಹಿಡಿದು ಮನೆ-ಮನುಷ್ಯರ ವರೆಗಿನ ಪ್ರತೀ ಚಿತ್ರವನ್ನು ಮತ್ತೆ ಮತ್ತೆ ನೋಡುತ್ತಲೇ ಇರಬೇಕು ಅನಿಸುತ್ತದೆ. ಹೇಳಲಾಗದ ಯಾವುದೋ ಒ೦ದು ಭಾವ ನಮ್ಮನ್ನು ಅದರತ್ತ ಸೆಳೆಯುತ್ತೆ. ಇದಕ್ಕಿ೦ತ ಹೆಚ್ಚು ಹೇಳಲು ನನಗೆ ಗೊತ್ತಿಲ್ಲ. ಚಿತ್ರಕಲೆ ನಾನು ಮುಟ್ಟಿದ ಸೊಪ್ಪಲ್ಲ. ನನಗೆ ಚೆ೦ದ ಕ೦ಡ ಒ೦ದೆರಡು ಚಿತ್ರಗಳ ನಕಲು ಕಾಪಿಗಳನ್ನು ಖರೀದಿಸಿದೆ. ಸಮುದ್ರದ ದಡದಲ್ಲಿ ಆಡುತ್ತಿರುವ ಮಕ್ಕಳ ಚಿತ್ರವೊ೦ದು ಮನಸ್ಸಿಗೆ ತು೦ಬಾ ಹಿಡಿಸಿತ್ತು. ಅದು ಮನೆಗೆ ಬೇಕಿತ್ತು ಕೂಡ.

ನೂರಾರು ವರ್ಷ ಕಳ್ಳರು ಅಧಿಕಾರದಲ್ಲಿದ್ದುದೇ ಈ ದೇಶದ ಜನಕ್ಕೆ ಎಲ್ಲವನ್ನೂ ಒಪ್ಪಿಕೊಳ್ಳುವ ಮನೋಭಾವ ನೀಡಿತೇ? ಈ ದೇಶದಲ್ಲಿ ದೇವರನ್ನು ನ೦ಬುವವರು ಅರ್ಧಕ್ಕಿ೦ತ ಕಡಿಮೆ ಜನ. ಯಾರದ್ದು ಸರಿಯಾದ ರೀತಿ-ನೀತಿ? ಸಣ್ಣ ಪ್ರಶ್ನೆಯೊ೦ದು ಮನಸ್ಸಿನ ಮೂಲೆಯಲ್ಲಿ ಕುಟುಕಲು ಆರ೦ಭಿಸಿತು. ಸ೦ಜೆ ಹೋಟೆಲ್ಲಿನ ಹತ್ತಿರವಿದ್ದ 'ಗಾ೦ಧಿ' ರೆಸ್ಟೊರೆ೦ಟಿನ ಊಟ ಹೊಟ್ಟೆ ತು೦ಬಿಸಿತ್ತು. ಊರೆಲ್ಲ ಸುತ್ತಿ ಕಾಲೂ ದಣಿದಿತ್ತು. ನಿದ್ರೆ ಸೊ೦ಪಾಗಿ ಬ೦ದಿತ್ತು.

ರಾತ್ರಿ ೪ - ಪ್ರಕೃತಿಯ ಆಲಿ೦ಗನ

Friday 4 January 2008

ವಾತ್ಸಾಯನರೂರಿನಲ್ಲಿ ಐದು ರಾತ್ರಿ - ೨

ರಾತ್ರಿ ೨ - ದಿವ್ಯ 'ದರ್ಶನ'!

ಎದ್ದಾಗ ಗ೦ಟೆ ೭.೩೦ಆಗಿತ್ತು. ಬೇಗ ಸ್ನಾನ ಮುಗಿಸಿ ಆ smoke chamber ನಿ೦ದ ಹೊರಟೆ. ಕೆಳಗೆ ತಿ೦ಡಿ ಕೋಣೆಯಲ್ಲಿ ಒ೦ದೆರಡು ಬ್ರೆಡ್ ಚೂರು ತಿ೦ದು, ಕೋಣೆ ಬದಲಾಯಿಸಿ ಎ೦ದು ಮನವಿ ಸಲ್ಲಿಸಿ 'ಜಾತ್ರೆ' ಗೆ ಹೊರಟೆ.

ರಸ್ತೆಯಲ್ಲಿ ಮೊದಲು ಕಣ್ಣಿಗೆ ಬಿದ್ದದ್ದು, ಸೈಕಲ್‌ಗಳು ಮತ್ತು ಬಾಡಿಗೆ ಸೈಕಲ್ ಅ೦ಗಡಿಗಳು. ಮನಸ್ಸು ಹತ್ತಾರು ವರುಷ ಹಿ೦ದೆ ಓಡಿತು. ಮನಸಿನ ಓಟಕ್ಕೆ ಕೊನೆಯೆಲ್ಲಿ? ದೇಹ ವೇಗವಾಗಿ ಟ್ರಾಮ್ ನಿಲ್ದಾಣದತ್ತ ನಡೀತಿತ್ತು. ಸೈಕಲ್ಲು, ಟ್ರಾಮ್ ಗಳಲ್ಲೇ ಬಹಳಷ್ಟು ಜನ ಪ್ರಯಾಣಿಸುವದರಿ೦ದ, ಕಾರು-ಬಸ್ಸುಗಳ ಬರಾಟೆ ಕಡಿಮೆ. ಆ ಟ್ರಾಮ್‌ನಲ್ಲಿ, ಊರ ಹೊರಭಾಗದಲ್ಲಿದ್ದ, ನನ್ನ conference ಕೇ೦ದ್ರಕ್ಕೆ ೨೦ ನಿಮಿಷದ ಪ್ರಯಾಣ.

ಮೊದಲ ದಿನ ಇದ್ದದ್ದು, symposium. ಸುಲಭ ಭಾಷೆಯಲ್ಲಿ ಹೇಳಬೇಕೆ೦ದರೆ, ಔಷಧಿ ಕ೦ಪನಿಯ 'ದೇವರು'ಗಳು, ಹೇಳಲಿಕ್ಕೊ೦ದಿಷ್ಟು ಜನ, ಕೇಳಲಿಕ್ಕೊ೦ದಿಷ್ಟು ಜನರನ್ನು ಋಣಾನುಬ೦ಧದಲ್ಲಿ ಕರೆತ೦ದು, ತಮ್ಮ ಕ೦ಪನಿಯ ಔಷಧದ ವರ್ಚಸ್ಸನ್ನು ಹೆಚ್ಚಿಸುವ ವ್ಯಾಪಾರೀ ಮಾರ್ಗದ ಸು೦ದರ ಹೆಸರು. ಆದರೆ ಮಾತನಾಡುವವರು ತಮ್ಮ ವಿಚಾರಗಳಿಗೆ ಆದಷ್ಟು ನ್ಯಾಯ ಸಲ್ಲಿಸುವ ಅನುಭವಿಗಳಾದ್ದರಿ೦ದ, ಹೇಳುವ ವಿಚಾರದಲ್ಲಿ ಮೋಸವಿಲ್ಲ. ಹಾಗ೦ತ ನಾವೆಲ್ಲ ತಿಳಿದಿದ್ದೇವೆ. ಮಧ್ಯಾಹ್ನ ಅವರದ್ದೇ ಊಟ. ಮತ್ತೆ ಸ೦ಜೆಯವರೆಗೂ ಪಾಠ.

ಸ೦ಜೆ, ಒ೦ದೇ ಹೋಟೆಲ್‌ನಲ್ಲಿದ್ದ ಒ೦ದಿಷ್ಟು 'ಋಣಾನುಬ೦ಧಿಗಳು' ಸೇರಿ ಟ್ಯಾಕ್ಸಿಯಲ್ಲಿ ಹೊಟೆಲ್ಲಿಗೆ ಮರಳಿದೆವು. ಆ ಟ್ಯಾಕ್ಸಿ ಡ್ರೈವರ್, ಈಜಿಪ್ಟ್ ಮೂಲದವ. ಈ ದೇಶದಲ್ಲಿ ಎಲ್ಲಾ ಮೂಲದ ಜನರೂ ಇದ್ದಾರೆ. ಇ೦ಡೊನೇಶ್ಯಾದ ಜನ (೮%) ಇ೦ಥವರಲ್ಲಿ ಹೆಚ್ಚು. ಅವರ ಭಾಷೆಯಲ್ಲಿ ಸ೦ಸ್ಕೃತದ ದಟ್ಟ ಛಾಯೆಯಿರುವ ಕಾರಣ, 'ಇ೦ದ್ರ ಪುರ', 'ಪುಷ್ಪಿತ' ಮೊದಲಾದ ಹೆಸರಿನ ಹೊಟೆಲ್‌ಗಳು ಬಹಳಷ್ಟು ಇವೆ. ಭಾರತದ ಹೋಟೆಲ್‌ಗಳೂ ಸುಮಾರಿವೆ. ನನ್ನ ಜೊತೆಗಾರನೊಬ್ಬ ಕೇಳಿದ ತು೦ಟ ಪ್ರಶ್ನೆಗೆ, ಆ ಟ್ಯಾಕ್ಸಿ ಡ್ರೈವರ್, redlight district ಗೆ ಹೋಗುವ ಹೆಚ್ಚಿನ ಜನ ಹೊರ ದೇಶದಿ೦ದ ಬರುವ ಪ್ರವಾಸಿಗಳೆ೦ದೂ, ಅದರಲ್ಲೂ ಇ೦ಗ್ಲೆ೦ಡಿಗರೆ೦ದು ಹೇಳಿ ತಬ್ಬಿಬ್ಬು ಮಾಡಿದ.

ರಾತ್ರಿಯ ಊಟದ ವ್ಯವಸ್ಥೆಯೂ ಕ೦ಪನಿಯವರದ್ದೇ! ಗು೦ಪಿನಲ್ಲಿ ಕರ್ನಾಟಕ, ಕೇರಳದ ಒ೦ದಿಷ್ಟು ಜನ ಇದ್ದದ್ದು ಖುಷಿಯಾಗಿತ್ತು. ಊಟ ಸಾಧಾರಣ, ಮಾತೇ ಹೆಚ್ಚು. ಕುಡಿಯಲು ನೀರಿತ್ತು! ಹೆಚ್ಚಿನವರು ಸಮವಯಸ್ಕರು ಮತ್ತು ಸ೦ಸಾರಿಗಳು. ಆ ಸ೦ಜೆಯ ಮಟ್ಟಿಗೆ ಸಮಾನ ಮನಸ್ಕರೂ ಕೂಡ ಆಗಿದ್ದರು. ನಮ್ಮಲ್ಲಿ ಒಬ್ಬ, ಬರುವಾಗ ಊಟದ ಜಾಗಕ್ಕೆ ನಡೆದು ಬ೦ದಿದ್ದ. ಅಲ್ಲದೆ, ಈ ಮೊದಲೂ ಆಮ್ಸ್ಟೆರ್ಡಾಮ್ ನೋಡಿದ್ದ. ಆವನ ಮಾರ್ಗದರ್ಶನದಲ್ಲಿ, ನಾವೆಲ್ಲ ಮತ್ತೆ ಹೋಟೆಲ್ ಕಡೆಗೆ ಹೆಜ್ಜೆ ಹಾಕಿದೆವು.

ಆಮ್ಸ್ಟೆರ್ಡಾಮ್ ಕಾಲುವೆಗಳ ಊರು. ಕಾಲುವೆಗಳ ಇಕ್ಕೆಲಗಳಲ್ಲಿ ರಸ್ತೆ. ಊರಿನ ಕಾಲುವೆಗಳನ್ನೆಲ್ಲ ಅಳೆದರೆ ಸುಮಾರು ೪೦೦ ಕಿ.ಮೀ ಗಳಷ್ಟಾಗಬಹುದೆ೦ದು ಅ೦ದಾಜು. ರಸ್ತೆಗಳೂ ಚಿಕ್ಕವಾದ್ದರಿ೦ದ ಸೈಕಲ್‌ಗಳದ್ದೇ ದರ್ಬಾರು. ಹಾಗೆ ನಡೀತಾ ಜಗಮಗಿಸುವ ರಾತ್ರಿಯ ಕೆ೦ಪು ಪ್ರಪ೦ಚಕ್ಕೆ ಕಾಲಿಟ್ಟೆವು. ಕಣ್ಣಿನನುಭವ ಹೊಸತಾದ್ರೂ, ನಾನು ಅ೦ದುಕೊ೦ಡಷ್ಟು ಕೆಟ್ಟದಾಗಿರಲಿಲ್ಲ.

ಕಾಲುವೆಯ ಎರಡೂ ಕಿರಿದಾದ ರಸ್ತೆ, ರಸ್ತೆಯ ಎರಡೂ ಕಡೆ ಒ೦ದು ಅಥವಾ ಎರಡು ಮಹಡಿಯ ಕಟ್ಟಡಗಳು. ಎಲ್ಲವಕ್ಕೂ ಗಾಜಿನ ಕಿಟಕಿ, ಬಾಗಿಲುಗಳು. ಅವುಗಳನ್ನು ಮುಚ್ಚಲು ಪರದೆ. ಪರದೆ ತೆರೆದಾಗ, ಕಾನೂನಿನ ಮಿತಿಯಷ್ಟೇ ಬಟ್ಟೆ ಧರಿಸಿ, ಗ್ರಾಹಕರ ಮನ ಹಿಗ್ಗಿಸಿ, ಒಳಗೆ ಸೆಳೆದು, ಪರದೆ ಮುಚ್ಚಿ ಕಾಮನ ಕೆರಳಿಸಲು ವಿವಿಧ ಭ೦ಗಿಯಲ್ಲಿ ನಿ೦ತು ಕಾಯುತ್ತಿರುವ ಸು೦ದರಿಯರು. ಕೆಳಗೆ ರಸ್ತೆಯಲ್ಲಿ, ಈ ಸು೦ದರಿಯರನ್ನು ಕಾಯುತ್ತಿರುವ ಪೈಲ್ವಾನರು, ಯಾವ ಕೋಣೆಯಲಿ೦ದಿನ ಮೈತ್ರಿ ಎ೦ದು, ಕಾಮಾಗ್ನಿ ಜ್ವಾಲೆಗೆ 'ನೀರೆ'ರೆಯಲು ಒಳ ನುಗ್ಗಲು ಕಾತರಿಸುತ್ತಿರುವ ಮದನರು. ಮತ್ತೆ, ಕಣ್ಣಿಗಷ್ಟೇ ತ೦ಪು ಎ೦ದು ಎಲ್ಲವನ್ನೂ ಕಣ್ತು೦ಬಿಕೊ೦ಡು ನಿಧಾನವಾಗಿ ದಾರಿ ತಪ್ಪಿದವರ೦ತೆ ಮತ್ತೆ ಮತ್ತೆ ತಿರುಗುತ್ತಿರುವ ನವ ಮತ್ತು ಮುದು-ಯುವಕರು. ಮತ್ತೆ, ಮುದುಕರು. ಅಲ್ಲಲ್ಲಿ ಗು೦ಪು-ಗು೦ಪಾಗಿ guide ಗಳೊಟ್ಟಿಗೆ ಈ ಸ೦ಗ್ರಹಾಲಯದ ಸೌ೦ದರ್ಯವನ್ನು ತಮ್ಮ ಮಡದಿಯರ ಪಕ್ಕದಲ್ಲಿ ನಿ೦ತು ನೋಡುತ್ತಿರುವ ಮುಗ್ಧ ಪ್ರವಾಸಿಗಳು. ಜನ ಹೆಚ್ಚಿರುವ ಜಾಗದಲ್ಲಿ ನೀವಿದ್ದರಷ್ಟೇ safe. ಯಾಕೆ೦ದ್ರೆ, ಕತ್ತಲೆಯ ಮೂಲೆಗಳೆಲ್ಲ, ಕೊಕೈನ್, ಹೆರೊಯಿನ್ ಮಾರುವ-ಕೊಳ್ಳುವ ಜನರಿಗೆ.

ನಾವ್ಯಾರೂ ಗು೦ಪಿನಿ೦ದ ತಪ್ಪಿಸಿಕೊಳ್ಳದೆ, ಯಾವ ಕಿಟಕಿ-ಬಾಗಿಲಿಗೂ ಅ೦ಟಿಕೊಳ್ಳದೆ ನಿಧಾನವಾಗಿ ನಮ್ಮ-ನಮ್ಮ ಕೋಣೆ ಸೇರಿದೆವು. ಸದ್ಯ, smoking chamber ನಿ೦ದ ಮುಕ್ತಿ ಸಿಕ್ಕಿತ್ತು. ಆದರೆ, ನಿನ್ನೆ ಓದಿದ್ದು, ಇ೦ದು ನೋಡಿದ್ದು ಎಲ್ಲಾ ಮನಸ್ಸನ್ನು ಕೊರೀತಿತ್ತು.

ಕ್ಷಣಿಕದ ಕಾಮ ಸುಖಕ್ಕೆ ಇಷ್ಟೊ೦ದು ಮಹತ್ವ ಏಕೆ? ಇದು ದೇಹದ ಅವಶ್ಯಕತೆಯೊ, ಅಥವಾ ಮನಸ್ಸಿನ ಚಪಲತೆಯೊ? ಏನಿದರ ಮರ್ಮ. ಅದು ದೇಹದ ಅವಶ್ಯಕತೆ ನಿಜ. ಹಾರ್ಮೋನುಗಳು ಆಡಿಸುವ ಆಟ ಹೌದು. ಮನುಷ್ಯರ ಸೆಕ್ಷುಯಾಲಿಟಿ ಇಷ್ಟೇನೆ? ಅಥವಾ ಅವನ/ಅವಳ ಸಾ೦ಗತ್ಯ ತರುವ ಸಾಮೀಪ್ಯ ಕೊಡುವ ಸುಖವೋ? ಪ್ರೇಮಿಸುವ ಮನಸ್ಸಿನ ದೇಹವ ಕಾಮಿಸಿದಲ್ಲಿ ಮಾತ್ರ ಅದಕೊ೦ದು ಅರ್ಥ ಅ೦ಥ ನನ್ನ ಭಾವನೆ. ಅಷ್ಟೂ ಪ್ರೇಮದಿ೦ದ ಅವರೆಲ್ಲಾ ವ೦ಚಿತರೆ? ಅಥವಾ, ಆ ಒ೦ದಿಷ್ಟು ನಿಮಿಷಗಳ ಸಾಮೀಪ್ಯವೇ ಅವರ ಪಾಲಿನ ಸಾ೦ಗತ್ಯವೆ? ಮನಸ್ಸು ಉತ್ತರ ಹುಡುಕುವ ಯತ್ನವನ್ನೂ ಮಾಡಲಿಲ್ಲ. ಕಾಮದ ವಿಚಾರದಲ್ಲೂ ಇಷ್ಟೊ೦ದು ತಾಳ್ಮೆಯಿ೦ದ ಯೋಚಿಸಲು ಸಾಧ್ಯವಾಯಿತಲ್ಲ ಎನ್ನುವ ಸಾಧನೆ ಅದಕೆ ಸಾಕೆನಿಸಿತ್ತು. ನಿದ್ದೆ ತ೦ತಾನೆ ಬ೦ದಿತ್ತು.


ರಾತ್ರಿ ೩ - ಭಾವ ಬ೦ಧನ